ಬೆಂಗಳೂರು: ರಾಜ್ಯದಲ್ಲಿ ಜನ ಡೆಂಗ್ಯೂನಿಂದ ಸಾಯುತ್ತಿದ್ದರೆ, ಸಚಿವ ದಿನೇಶ್ ಗುಂಡೂರಾವ್‌ ಅವರು ಸ್ವಿಮ್ಮಿಂಗ್ ಪೂಲ್‍ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಎಂಎಲ್‍ಸಿ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಜನ ಸಾಯ್ತಿದ್ದಾರೆ. ಸೊಳ್ಳೆ ನಿಯಂತ್ರಣ ಆಗಬೇಕು. ಎಲ್ಲೂ ಔಷಧಿ ಹೊಡೆಯುತ್ತಿಲ್ಲ. ಜನ ಸಾಯ್ತಿದ್ದಾರೆ, ಸಚಿವರು ಅವರ ಪಾಡಿಗೆ ಅವರಿದ್ದಾರೆ ಎಂದು ಕಿಡಿಕಾರಿದರು.

ದಿನೇಶ್ ಗುಂಡೂರಾವ್ ಅವರಿಗೆ ಹೆಲ್ತ್ ಬಗ್ಗೆ ಏನು ಗೊತ್ತು? ಅವರ ಪಿಎ ಅಥವಾ ಡಾಕ್ಟರ್ ಹೇಳಿದಂತೆ ಕೇಳುತ್ತಾರೆ. ಜನರಿಗೆ ಔಷಧಿ ಕೊಡೋದನ್ನು ಮಾಡಬೇಕು. ಇಲ್ಲದಿದ್ದರೆ ಸರ್ಕಾರಕ್ಕೆ ಔಷಧಿ ಕೊಡಬೇಕಿದೆ. ಇವರು ಸ್ವಿಮ್ಮಿಂಗ್ ಪೂಲ್ ನಿಂದ ಹೊರಗೆ ಬರಲ್ಲ. ಇರೋರೆಲ್ಲ ಕೆಲಸ ಮಾಡದೆ, ಲೂಟಿ ಹೊಡೆಯುತ್ತಿದ್ದಾರೆ ಎಂದರು.

ಮುಖ್ಯಮಂತ್ರಿ ರಾಜೀನಾಮೆ ಕೊಟ್ರೆ ಎಲ್ಲವೂ ಸರಿಹೋಗಲಿದೆ ಎಂದು ಡೆಂಗ್ಯೂ ನಿಯಂತ್ರಣ ಮಾಡದ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.