ಬೆಂಗಳೂರು: ರಾಜ್ಯದ ಗೃಹಿಣಿಯರಿಗೆ ಸರ್ಕಾರ ಶಾಕ್ ಕೊಟ್ಟಿದೆ. ಗೃಹಲಕ್ಷ್ಮೀ ಯೋಜನೆ ನೋಂದಣಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ’ಗೃಹಲಕ್ಷ್ಮೀ’ ನೋಂದಣಿ ಸ್ಥಗಿತ ಆಗಿದೆ ಅಂತಾ ಕೇಳಿ ನನಗೆ ಆಶ್ಚರ್ಯ ಆಯ್ತು.
ತಕ್ಷಣ ಇಲಾಖೆ ಕಾರ್ಯದರ್ಶಿ, ನಿರ್ದೇಶಕರ ಕರೆದು ಮಾತನಾಡಿದೆ. ಅತಾಚುರ್ಯದಿಂದ ನಮ್ಮ ಇಲಾಖೆಯಿಂದ ಈ ಟ್ವೀಟ್ ಆಗಿದೆ. ಏಕೆ ಆ ರೀತಿ ಆಯ್ತು ಗೊತ್ತಾಗುತ್ತಿಲ್ಲ. ಟ್ವೀಟ್ ಸಂಬಂಧ ಎಲ್ಲರಿಗೂ ನೋಟಿಸ್ ಜಾರಿ ಮಾಡಿದ್ದೇವೆ. ಈ ವಿಚಾರವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣ ನಿರ್ವಹಿಸುವವರ ವಿರುದ್ಧ ಕ್ರಮ ಆಗುತ್ತೆ ಎಂದು ಹೇಳಿದ್ದಾರೆ.
ನಮ್ಮ ಇಲಾಖೆಯಿಂದ ಈಗಾಗಲೇ ಹಣ ವರ್ಗಾವಣೆ ಆಗಿದೆ. ಬ್ಯಾಂಕ್ನಿಂದ ಮಾತ್ರ ಹಣ ಸ್ಲೋ ಆಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಎಲ್ಲರಿಗೂ ಹಣ ವರ್ಗಾವಣೆ ಆಗುತ್ತೆ. ನಿಧಾನವಾಗಿ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಆಗುತ್ತಿದೆ.
ಫಲಾನುಭವಿಗಳಿಗೆ ನಮ್ಮ ಇಲಾಖೆಯಿಂದ ಹಣ ಕಳುಹಿಸುತ್ತಿದ್ದೇವೆ. ಹೊಸದಾಗಿ ನೋಂದಣಿ ಮಾಡಿಕೊಂಡವರಿಗೂ ಲಾಭ ಸಿಗುತ್ತಿದೆ. ಗೃಹಲಕ್ಷ್ಮೀ ನಿರಂತರವಾಗಿ ನಡೆಯುವ ಯೋಜನೆ ಎಂದು ತಿಳಿಸಿದರು.