ಬೆಂಗಳೂರು: ಇಂದಿನಿಂದ ಐದು ದಿನಗಳ ಕಾಲ ಮೆಟ್ರೋ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಬಗ್ಗೆ ಬಿಎಂಆರ್‌ಸಿಎಲ್‌ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ಹಸಿರು ಮಾರ್ಗದ ನಾಗಸಂದ್ರದಿಂದ ಮಾದಾವರವರೆಗಿನ ವಿಸ್ತೃತ ಮಾರ್ಗದಲ್ಲಿ ಸಿಗ್ನಲಿಂಗ್‌ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪೀಣ್ಯ ಇಂಡಸ್ಟ್ರಿ- ನಾಗಸಂದ್ರ ಮೆಟ್ರೋ ನಿಲ್ದಾಣಗಳ ನಡುವೆ 5 ದಿನಗಳು ರೈಲು ಸಂಚಾರ ಸಂಪೂರ್ಣ ಬಂದ್‌ ಆಗಲಿದೆ ಎಂದು ಮಾಹಿತಿ ನೀಡಿದೆ. ನಿಗದಿತ ದಿನಗಳಂದು ಹಸಿರು ಮಾರ್ಗದಲ್ಲಿ ರೈಲು ರೇಷ್ಮೆ ಮಂಡಳಿಯಿಂದ ಆರಂಭವಾಗಿ ಪೀಣ್ಯ ಇಂಡಸ್ಟ್ರಿವರೆಗೂ ಮಾರ್ಗ ಮಾತ್ರ ಸಂಚಾರ ನಡೆಸಲಿವೆ.

ಆ ಬಳಿಕ ಬರುವ ಜಾಲಹಳ್ಳಿ, ದಾಸರಹಳ್ಳಿ, ನಾಗಸಂದ್ರ, ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ ನಿಲ್ದಾಣಗಳಿಗೆ ರೈಲು ಸೇವೆ ಇರಲ್ಲ. ಒಟ್ಟಾರೆ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರ ನಡುವೆ 4 ನಿಲ್ದಾಣಗಳ ನಡುವೆ 5 ದಿನ ಸಂಚಾರ ಬಂದ್‌ ಆಗಲಿದೆ. ಆಗಸ್ಟ್‌ 20, 23, 30 ಹಾಗೂ ಸೆಪ್ಟೆಂಬರ್‌ 6, ಸೆಪ್ಟೆಂಬರ್‌ 11 ಪೂರ್ಣ ದಿನ ಪೀಣ್ಯ ಇಂಡಸ್ಟ್ರಿಯಿಂದ ನಾಗಸಂದ್ರವರೆಗೂ ರೈಲುಗಳ ಸಂಚಾರ ಇರುವುದಿಲ್ಲ. ಪೀಣ್ಯ ಇಂಡಸ್ಟ್ರಿಯಿಂದ ರೈಲು ಆರಂಭವಾಗಲಿದೆ. ಆ ಮಾರ್ಗದ ಉಳಿದ ನಿಲ್ದಾಣಗಳ ನಡುವೆ ಎಂದಿನಂತೆ ಸೇವೆ ಇರಲಿದೆ.

ಆಗಸ್ಟ್‌ 24ರಂದು ನಾಗಸಂದ್ರದಿಂದ ರಾತ್ರಿ 11.05ರ ಬದಲಾವಣೆ 10 ಗಂಟೆಗೆ ಕೊನೆಯ ರೈಲು ಹೊರಡಲಿದೆ. ಒಂದು ಗಂಟೆ ಬೇಗ ಸೇವೆ ಕೊನೆಗೊಳಿಸಲಾಗುತ್ತಿದೆ. ಆಗಸ್ಟ್‌ 25ರಂದು ನಾಗಸಂದ್ರದಿಂದ ರೈಲು ಬೆಳಿಗ್ಗೆ 5 ಗಂಟೆಯ ಬದಲಾಗಿ 6 ಗಂಟೆಗೆ ಆರಂಭವಾಗಲಿದೆ. ಇದೇ ದಿನಗಳಂದು ಪೀಣ್ಯ ಇಂಡಸ್ಟ್ರಿಯಿಂದ ಎಂದಿನಂತೆ ಸೇವೆ ಇರಲಿದೆ. ಆಗಸ್ಟ್‌ 24ರಂದು ಕೊನೆಯ ರೈಲು ಪೀಣ್ಯ ಇಂಡಸ್ಟ್ರಿಯಿಂದ ರಾತ್ರಿ 11.12 ಕ್ಕೆ ಹೊರಡಲಿದೆ. ಆಗಸ್ಟ್‌ 25 ಕ್ಕೆ ಮೊದಲ ರೈಲು 5 ಕ್ಕೆ ಆರಂಭವಾಗಲಿದೆ.

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಅಲ್ಲದೇ, ಹಸಿರು ಮಾರ್ಗದ ಪೀಣ್ಯ ಇಂಡಸ್ಟ್ರಿಯಿಂದ ರೇಷ್ಮೆ ಮಂಡಳಿವರೆಗೂ ರೈಲುಗಳ ಸಂಚಾರದಲ್ಲಿ ಸಮಸ್ಯೆ ಇಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ನಮ್ಮ ಮೆಟ್ರೋ ನಾಗಸಂದ್ರ ಮಾದಾವರ ನಡುವೆ ಭಾನುವಾರದಿಂದ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಈ ಮಾರ್ಗವನ್ನು ಸೆಪ್ಟೆಂಬರ್‌ನಲ್ಲಿ ಆರಂಭಿಸಬೇಕು ಎಂದು ಅಗತ್ಯ ಸಿದ್ಧತೆ ನಡೆಸಲಾಗುತ್ತಿದೆ. ಸಿಗ್ನಿಲಿಂಗ್‌ ಕೆಲಸ ಬಾಕಿ ಇದ್ದು, ಅವುಗಳನ್ನು ಪೂರ್ಣಗೊಳಿಸಲು ಕೆಲ ನಿಲ್ದಾಣಗಳ ನಡುವೆ ರೈಲು ಸಂಚಾರ ರದ್ದು ಮಾಡಲಾಗುತ್ತಿದೆ.