ಬೆಂಗಳೂರು: ನಾಳೆ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಆಹ್ವಾನ ನೀಡಲಾಗಿದ್ದು, ಹಾಗಾಗಿ ದೇವೇಗೌಡ್ರ ಕುಟುಂಬ ವಿಶೇಷ ವಿಮಾನದಲ್ಲಿ ತೆರಳಿದರು.
ಈ ಮುನ್ನ ಮಾತಾಡಿದ ದೇವೇಗೌಡ್ರು, ಅಯೋಧ್ಯೆಯಲ್ಲಿ ನಡೆಯೋ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕಾಶ್ಮೀರದ ಮುಸ್ಲಿಮರು ಹೂವು ಕಳಿಸಿದ್ದಾರೆ. ಪಶ್ಚಿಮ ಬಂಗಾಳದ ಜನ ಕೂಡ ಹೂವಿನ ಮಾಲೆ ಕಟ್ಟಿಕೊಟ್ಟಿದ್ದಾರೆ. ಅನೇಕ ರಾಜ್ಯಗಳಿಂದ ಅಯೋಧ್ಯೆಗೆ ವಿಶೇಷ ಉಡುಗೊರೆಗಳು ಬಂದಿವೆ. ಹಿಂದೂಗಳು ಬಿಡಿ, ಮುಸ್ಲಿಮರೇ ಹೂವು ಮಳೆ ಸುರಿಸುತ್ತಿದ್ದಾರೆ. ಎಲ್ಲರೂ ಎಲ್ಲವನ್ನೂ ಅರ್ಥ ಮಾಡಿಕೊಳ್ಳಬೇಕಿದೆ. ಯಾರಿಗೆ ಯಾರು ಪ್ರೇರಣೆ ಮಾಡಲ್ಲ ಎಂದರು.
ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಾಜಿ ಪ್ರಧಾನಿಗಳಾದ ಮಾನ್ಯ ಹೆಚ್.ಡಿ.ದೇವೇಗೌಡರು, ಅವರ ಧರ್ಮಪತ್ನಿ ಚನ್ನಮ್ಮನವರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಅಯೋಧ್ಯೆಗೆ ಪ್ರಯಾಣ ಬೆಳೆಸಿದರು.