ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಮ್ಮಸಂದ್ರದಲ್ಲಿ ಸೋಮವಾರ ಕ್ರಿಕೆಟ್ ಪಂದ್ಯದಲ್ಲಿ ಸೋತ ಮತ್ತು ಗೆದ್ದ ತಂಡಗಳ ನಡುವಿನ ಜಗಳ ಆಟಗಾರನ ದಾರುಣ ಸಾವಿನಲ್ಲಿ ಅಂತ್ಯವಾಗಿದೆ.
ಮೃತ ವ್ಯಕ್ತಿಯನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ರೋಷನ್ ಎಂದು ಗುರುತಿಸಲಾಗಿದೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೋತು ಸೋಲಿನ ಬೇಸರದಲ್ಲಿದ್ದ ತಂಡದ ಪ್ರಶಾಂತ್ ಪಂದ್ಯಾವಳಿ ನಡೆದ ಜಾಗದಲ್ಲಿಯೇ ಮದ್ಯ ಕುಡಿಯುತ್ತಿದ್ದ. ಸಮೀಪದಲ್ಲಿಯೇ ಗೆಲುವಿನ ಸಂಭ್ರಮದಲ್ಲಿದ್ದ ಮತ್ತೊಂದು ತಂಡದ ಸದಸ್ಯರು ಪಾರ್ಟಿ ಮಾಡುತ್ತಿದ್ದರು.
ಪಾರ್ಟಿಯಲ್ಲಿದ್ದ ರೋಷನ್ ಬಿಯರ್ ಬಾಟಲಿಯನ್ನು ಪ್ರಶಾಂತ್ ಮೇಲೆ ಎಸೆದ. ಇದರಿಂದ ಕೋಪಗೊಂಡ ಪ್ರಶಾಂತ್ ರೋಷನ್ ಜಗಳ ತೆಗೆದ. ಆಗ ರೋಷನ್ ಭಯದಿಂದ ಕಾರು ಏರಿದ್ದಾನೆ. ಪ್ರಶಾಂತ್ ಕೂಡ ಅದೇ ಕಾರೊಳಗೆ ತೂರಿ ರೋಷನ್ ಹಿಡಿಯಲು ಮುಂದಾದ.
ಕಾರು ಚಲಾಯಿಸುತ್ತಿದ್ದ ರೋಷನ್ ಅಡ್ಡಾದಿಡ್ಡಿ ಕಾರು ಚಲಾಯಿಸಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆಯನ್ನು ಅಪಘಾತ ಎಂದು ಬಿಂಬಿಸಲಾಗಿತ್ತು ಪೊಲೀಸರು ತನಿಖೆ ನಂತರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಶಂಕೆ ಬಂದಿದೆ.
ಆರೋಪಿ ರೋಷನ್ನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

