ದಾವಣಗೆರೆ: ರಾಮಮಂದಿರಕ್ಕೆ ಬಾಂಬ್ ಬೆದರಿಕೆ ಹಾಕಿದ ಹಿನ್ನೆಲೆ ಎಲ್ಲಾ ದೇವಸ್ಥಾನಗಳಲ್ಲೂ ಸೂಕ್ತ ಭದ್ರತೆ ಕೈಗೊಳ್ಳಲು ಸೂಚನೆ ನೀಡುವೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಈ ಕುರಿತು ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆದರಿಕೆ ಇ-ಮೇಲ್ ಕಳಿಸುತ್ತಾರೆ, ಪೊಲೀಸರು ಎಚ್ಚರಿಕೆ ವಹಿಸುತ್ತಾರೆ. ಎಂಡಿಗೆ ಆದೇಶ ಕೊಟ್ಟಿದ್ದೇನೆ, ತನಿಖೆ ನಡೆಸುತ್ತಾರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಅವಧಿಯಲ್ಲಿ ಬಾಂಬ್ ಬ್ಲಾಸ್ಟ್ ಆಗಿಲ್ವಾ? 6 ಕಡೆ ಸ್ಫೋಟ ಆಗಿದೆ. ಪ್ರಪಂಚ ಹುಟ್ಟಿದಾಗಿನಿಂದ ಇಂತಹ ಘಟನೆ ಆಗುತ್ತಿವೆ ಎಂದು ಹೇಳಿದ್ದಾರೆ.
ಬಿಜೆಪಿ ಅವಧಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸರಣಿ ಸ್ಫೋಟಗಳಾಗಿತ್ತು. ಮಲ್ಲೇಶ್ವರಂನಲ್ಲಿ ಬಾಂಬ್ ಸ್ಫೋಟ, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿದೆ. ಬಿಜೆಪಿ ಅವಧಿಯ ಬಾಂಬ್ ಸ್ಫೋಟ ಪ್ರಕರಣಗಳ ಬಗ್ಗೆ ಚೀಟಿಯಲ್ಲಿ ಬರೆದುಕೊಂಡು ಎಳೆಎಳೆಯಾಗಿ ಬಿಡಿಸಿ ಹೇಳಿದರು. ಇವುಗಳನ್ನು ಇಟ್ಟುಕೊಂಡು ಚುನಾವಣೆಗೆ ಹೋಗೋಣಾ ಎಂದು ಸವಾಲು ಹಾಕಿದ್ದಾರೆ.
ಅಲ್ಲದೇ, ಈ ಹಿಂದೆ ಶಕ್ತಿ ಯೋಜನೆ ಬಗ್ಗೆ ಪ್ರತಿಪಕ್ಷ ವಿಭಿನ್ನ ಹೇಳಿಕೆ ನೀಡಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ 15 ದಿನಗಳಲ್ಲಿ ಶಕ್ತಿ ಯೋಜನೆ ಜಾರಿಗೆ ತಂದಿದ್ದೇವೆ. ವಿರೋಧಿಗಳು ಲೋಕಸಭೆ ಚುನಾವಣೆ ಬಳಿಕ ನಮ್ಮ ಸರ್ಕಾರ ಪತನ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಅವರು ಬಡವರ ವಿರೋಧಿಗಳು. ಮುಂದಿನ ಐದು ವರ್ಷ ನಮ್ಮ ಸರ್ಕಾರ ಇರುತ್ತದೆ ಎಂದು ಭರವಸೆಯೊಂದಿಗೆ ಹೇಳಿದ್ದಾರೆ.
ಕೊರೊನಾ ಕಾಲದಲ್ಲಿ ನಿಲ್ಲಿಸಲಾದ 3600 ಬಸ್ಗಳನ್ನ ಪುನರ್ ಆರಂಭ ಮಾಡಲಾಗುವುದು. ಈಗ 5800 ಹೊಸ ಬಸ್ ಖರೀದಿಸಲಾಗಿದೆ. ಸದ್ಯದಲ್ಲಿ 900 ಸಿಬ್ಬಂದಿ ನೇಮಕಾತಿ ಇಷ್ಟರಲ್ಲಿಯೇ ಆಗಲಿದೆ. ಕಲ್ಯಾಣ ಕರ್ನಾಟಕದ 1600 ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.