ದಾವಣಗೆರೆ : ತಮ್ಮ ಪರಂಪರೆ ಆಚರಿಸಿಕೊಳ್ಳುವುದು ಆಯಾ ಜಾತಿ, ಧರ್ಮೀಯರಿಗೆ ಬಿಟ್ಟಿದ್ದು. ಮನೆಯಲ್ಲಿ ತಂತಮ್ಮ ಧರ್ಮ ಆಚರಣೆ ಮಾಡುವುದರಲ್ಲಿ ತಪ್ಪೇನಿಲ್ಲ. ಆದರೆ ಸಾರ್ವತ್ರಿಕ ಮತ್ತು ಶೈಕ್ಷಣಿಕ ಬದುಕಿನಲ್ಲಿ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹೂವಿನಮಡು ಗ್ರಾಮದಲ್ಲಿ ಶುಕ್ರವಾರ ರಂಭಾಪುರಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ತೀರ್ಪಿನ ವಿಚಾರವಾಗಿ ಕೆಲವರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ವಿವಿಧತೆಯಲ್ಲಿ ಏಕತೆ ಬೆಳೆಸುವ ಕೆಲಸವನ್ನು ರಾಜಕಾರಣಿಗಳು, ಮಠಾಧೀಶರು ಮಾಡಬೇಕು. ರಾಜಕೀಯ ಲಾಭ, ಮತ ಓಲೈಕೆಗಾಗಿ ಕ್ಷುಲ್ಲಕ ಹೇಳಿಕೆ ನೀಡುವುದು ಯಾರಿಗೂ ಶೋಭೆ ತರುವುದಿಲ್ಲ. ಇದರಿಂದ ಜಾತಿ-ಜಾತಿಗಳ ಮಧ್ಯೆ ಘರ್ಷಣೆಗೂ ದಾರಿಯಾಗುತ್ತದೆ. ರಾಜಕೀಯ ಸಂಘರ್ಷದಲ್ಲಿ ಧರ್ಮ ನಾಶವಾಗದಿರಲಿ ಎಂದರು. ಹಿಜಾಬ್ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಇಲ್ಲಸಲ್ಲದ ಮಾತುಗಳನ್ನಾಡುವುದು ಕಾಂಗ್ರೆಸ್ ಪಕ್ಷದ ಘನತೆ, ವರ್ಚಸ್ಸಿಗೆ ಧಕ್ಕೆ ತರುತ್ತದೆ. ಪೇಟ ಹಾಗೂ ಬಟ್ಟೆಯ ವಿಚಾರವಾಗಿ ರಾಜ್ಯದ ಪ್ರಬಲ ರಾಜಕಾರಣಿ ಇಂತಹ ಹೇಳಿಕೆ ನೀಡುವುದು ಸರಿಯಲ್ಲ.
ಸ್ವಾಮೀಜಿಗಳು ಪೇಟ ಧರಿಸುವುದು ಅನಾದಿಯಿಂದಲೂ ನಡೆದು ಬಂದಿದೆ. ಸ್ವಾಮಿ ವಿವೇಕಾನಂದರು ಸಹ ಪೇಟ ಧರಿಸುತ್ತಿದ್ದರು. ಇದನ್ನು ಯಾರೋ ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ ಎಂದು ಶ್ರೀಗಳು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಇನ್ನೊಂದು ವರ್ಷದಲ್ಲೇ ಚುನಾವಣೆ ಬರಲಿದೆ. ಹಿಂದೆ ಅಧಿಕಾರದಲ್ಲಿದ್ದಾಗ ಇದೇ ಸಿದ್ದರಾಮಯ್ಯನವರು ವೀರಶೈವ ಲಿಂಗಾಯತ ಸಮಾಜವನ್ನು ಇಬ್ಭಾಗ ಮಾಡಲು ಹೋರಟಿದ್ದರು. ಇದರಿಂದ ಕಾಂಗ್ರೆಸ್ ಪಕ್ಷ ಪೆಟ್ಟು ತಿಂದಿದ್ದನ್ನು ಮರೆಯಬಾರದು. ಮತ್ತೆ ಈ ರೀತಿಯ ವಿವಾದದ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ಜನರ ಭಾವನೆ ಕೆಡಿಸುವುದು ಸರಿಯಲ್ಲ. ಈ ಬಗ್ಗೆ ಆ ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿ ಮುಸ್ಲಿಮರ ವ್ಯಾಪಾರ ನಿಷೇಧಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಕಾನೂನು ಸಚಿವರು ನಿನ್ನೆಯೇ ಹೇಳಿಕೆ ನೀಡಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ 2002ರಲ್ಲಿ ಜಾರಿಗೆ ತಂದ ಕಾನೂನು ಅದು. ಹಿಂದಿನ ಸರ್ಕಾರದ ಆದೇಶದಂತೆ ಹಿಂದೂ ದೇವಾಲಯಗಳಲ್ಲಿ ಅದು ಜಾರಿಯಲ್ಲಿತ್ತು. ಹಿಂದೂ ಧಾರ್ಮಿಕ ಸ್ಥಳಗಳಲ್ಲಿ
ಹಿಂದೂಯೇತರರಿಗೆ ಮುಂಚಿನಿಂದಲೂ ಅವಕಾಶ ಇಲ್ಲ ಎಂದು ಅವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡರು.