ದಾವಣಗೆರೆ : ಖ್ಯಾತ ವೈದ್ಯ ಸಾಹಿತಿ, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಎಚ್.ಗಿರಿಜಮ್ಮ ದಾವಣಗೆರೆಯಲ್ಲಿಂದು ಹೃದಯಾಘಾತದಿಂದ ನಿಧನರಾದರು.
ಗಿರಿಜಮ್ಮ ಸರಳ ಕನ್ನಡದಲ್ಲಿ ವೈದ್ಯಕೀಯ ಮಾಹಿತಿಯನ್ನು ಒದಗಿಸಬೇಕು ಎನ್ನುವ ಧ್ಯೇಯದಿಂದ ಹತ್ತಾರು ಕೃತಿಗಳನ್ನು ರಚಿಸಿದ್ದ ಡಾ.ಗಿರಿಜಮ್ಮ ವೈದ್ಯಕೀಯ ಸಾಹಿತಿಯಾಗಿ ಜನಪ್ರಿಯರಾಗಿದ್ದರು. ಬೆಂಗಳೂರಿನಲ್ಲಿ ೨೦ ವರ್ಷಗಳ ಸುದೀರ್ಘ ಅವಧಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು.
ಪಿ ಯು ಸಿವರೆಗೆ ದಾವಣಗೆರೆಯಲ್ಲಿ ಓದಿದ್ದ ಗಿರಿಜಮ್ಮ, ನಂತರ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಂಡರು. ಗಿರಿಜಮ್ಮ ವೈದ್ಯರಾಗಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತು. ಕಾದಂಬರಿಗಾರ್ತಿ ತ್ರಿವೇಣಿ ಅವರ ಬರಹಗಳಿಂದ ಪ್ರೇರಣೆ ಪಡೆದು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರು. ಅವರ ಮೊದಲ ಕತೆ ‘ಹೂಬಳ್ಳಿಗೆ ಈ ಆಸರೆ’. ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳನ್ನು ಬರೆದಿದ್ದಾರೆ. ಅರ್ಧಾಂಗಿ, ಸಂಜೆಮಲ್ಲಿಗೆ, ಅನಾವರಣ ಸೇರಿದಂತೆ ಹಲವು ನೀಳ್ಗತೆಗಳೂ ಸೇರಿ ಒಟ್ಟು ೫೦ ಕತೆಗಳನ್ನು ಬರೆದಿದ್ದಾರೆ. ಗಿರಿಜಮ್ಮ ಅವರ ಐದು ಕಥಾಸಂಗ್ರಹಗಳು ಪ್ರಕಟವಾಗಿವೆ.