ದಾವಣಗೆರೆ: ವಿದ್ಯುತ್ ಪ್ರವಹಿಸುತ್ತಿದ್ದ ಬೆಸ್ಕಾಂ ಕಂಬ ಮುಟ್ಟಿದ ಪರಿಣಾಮ ಯುವಕನೊಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಇಲ್ಲಿನ ಯಲ್ಲಮ್ಮ ನಗರದ ಕುಂದುವಾಡ ರಸ್ತೆ ಬಳಿ ಭಾನುವಾರ ತಡರಾತ್ರಿ ಸಂಭವಿಸಿದೆ.
ಭಾರತ್ ಕಾಲೋನಿಯ ಮನೋಜ್ ಮಜ್ಜಿಗೆ(23) ಮೃತ ಯುವಕ. ರಾತ್ರಿ ತುಂತುರು ಮಳೆ ಬರುತ್ತಿದ್ದರಿಂದ ಕಂಬದಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಇದನ್ನರಿಯದೆ ಕಂಬ ಮುಟ್ಟಿದ ಯುವಕ ವಿದ್ಯುತ್ ಆಘಾತದಿಂದ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಬಡಾವಣೆ ಠಾಣೆ ಪೊಲೀಸರು, ಮರಣೋತ್ತರ ಪರೀಕ್ಷೆ ನಂತರ ಯುವಕನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಬದಿಯಲ್ಲಿ ಕರ್ಬ್ ಹಾಗೂ ಪೇವರ್ಸ್ ಹಾಕಲು ಗುಂಡಿ ಅಗಿಯಲಾಗಿತ್ತು. ಈ ಸಂದರ್ಭದಲ್ಲಿ ಯುಜಿ ಕೇಬಲ್ ಡ್ಯಾಮೇಜ್ ಆಗಿದ್ದು, ಇದನ್ನು ಗಮನಿಸದ ಗುತ್ತಿಗೆದಾರ ಹಾಗು ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೇ ಬಿಟ್ಟಿದ್ದಾರೆ.
ಯಾವುದೇ ಸುರಕ್ಷಾ ನಿಯಮ ಪಾಲಿಸದೆ ಕಾಮಗಾರಿ ಕೈಗೊಂಡಿದ್ದೇ ಯುವಕನ ಸಾವಿಗೆ ಕಾರಣವಾಗಿದ್ದು, ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಯುವ ಭಾರತ್ ಗ್ರೀನ್ ಬ್ರಿಗೇಡ್ ಅಧ್ಯಕ್ಷ ನಾಗರಾಜ್ ಸೂರ್ವೆ ಒತ್ತಾಯಿಸಿದ್ದಾರೆ.