ದಾವಣಗೆರೆ : ಕರ್ನಾಟಕದಲ್ಲಿಯೂ ಗುಜರಾತ್ ಮಾದರಿಯಲ್ಲಿ ಸಚಿವ ಸಂಪುಟ ರಚನೆಯಾಗಲಿ. ನಮ್ಮಲ್ಲಿ ಕೆಲ ನಾಯಕರು ಮತ್ತೆ ಮತ್ತೆ ಸಚಿವರಾಗುತ್ತಿದ್ದಾರೆ. ಈ ವಿಚಾರವಾಗಿ ನಾವೇನೂ ರೆಸಾರ್ಟ್ ರಾಜಕೀಯ ಮಾಡಲ್ಲ. ಸಿಎಂ ಸ್ಥಾನ ಬಿಟ್ಟು ಉಳಿದವರಿಗೆ ಗುಜರಾತ್ ಮಾದರಿ ಇರಲಿ ಎಂದು ದಾವಣಗೆರೆಯಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.
ನನ್ನ ಆಗ್ರಹ ಅಂದ್ರೆ ಗುಜರಾತ್ ಮಾದರಿಯಲ್ಲಿ ರಾಜ್ಯ ಸಚಿವ ಸಂಪುಟ ರಚನೆ ಆಗಬೇಕು. ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ರಾಜೀನಾಮೆ ಕೊಡಲ್ಲ. ಬಿಜೆಪಿ ಸರ್ಕಾರವೆಲ್ಲ ಅಧಿಕಾರಕ್ಕೆ ಬಂದಾಗ ಸಚಿವರಾದವರು ಪಕ್ಷ ಸಂಘಟನೆಗೆ ಹೋಗಬೇಕು. ಪಕ್ಷ ಅಧಿಕಾರಕ್ಕೆ ಬರಬೇಕು. ಈಗ ಸಿಎಂ ಬಸವರಾಜ ಬೊಮ್ಮಾಯಿ ಬಿಟ್ಟು ಉಳಿದವರಿಗೆ ಗುಜರಾತ್ ಮಾದರಿ ಅನುಸರಿಬೇಕು ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಸಿಎಂ ರಾಜಕೀಯ ಕಾರ್ಯದರ್ಶಿಯಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಮಕ್ಕಳಾಟವಾಗಿದೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ. ಮಕ್ಕಳಿಗೆ ಜಾತ್ರೆ ಕಾರು ಕೊಡಿಸಿದಂತೆ ನನಗೆ ಕಾರು ಕೊಟ್ಟಿದ್ದಾರೆ. ಮನೆ ಕೊಟ್ಟಿದ್ದಾರೆ, ಜನಪರ ಕೆಲಸ ಮಾತ್ರ ಮಾಡಲು ಆಗುತ್ತಿಲ್ಲ. ನನಗೆ ಸಚಿವ ಸ್ಥಾನ ನೀಡಿ ಎಂದು ಈಗಾಗಲೇ ಕೇಳಿದ್ದೇನೆ. ಶಾಸಕಾಂಗ ಸಭೆಯಲ್ಲಿ ಸಹ ಈ ವಿಚಾರವನ್ನು ಹೇಳಿದ್ದೇನೆ ಎಂದು ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಈ ಹಿಂದೆ ರೆಸಾರ್ಟ್ ರಾಜಕೀಯ ಮಾಡಿದ್ದೆ, ಈಗ ಮಾಡಲ್ಲ. ನನ್ನ ಮೇಲೆ ಇದೊಂದು ಕಪ್ಪು ಚುಕ್ಕೆ ಇದೆ. ಇನ್ಮುಂದೆ ನನ್ನ ವಾದವನ್ನು 4 ಗೋಡೆ ನಡುವೆ ಹೇಳುತ್ತೇನೆ. ನಾನು ಹುಲಿ, ಸಿಂಹ, ಆನೆ ಅಲ್ಲ ಜನ ಆ ರೀತಿ ಕರೆಯುತ್ತಾರಷ್ಟೇ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.