ಬೆಂಗಳೂರು: ಪ್ರಸ್ತುತ ಕಾಂಗ್ರೆಸ್ಸ್ ಸರ್ಕಾರದ ಅಧಿಕಾರಾವಧಿಯಲ್ಲಿಯೂ ೪೦% ಕಮೀಷನ್ ನಡೆಯುತ್ತಿದೆಯೆಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಆರೋಪಿಸಿದ್ದಾರೆ.
ಈ ಮುಂಚೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆಗೆ ‘ಶೇ 40 ರಷ್ಟು ಕಮಿಷನ್’ ಕೇಳುತ್ತಿದೆ ಎಂದು ಡಿ.ಕೆಂಪಣ್ಣ ಆರೋಪಿಸಿದ್ದರು. ಇದರ ಲಾಭ ಪಡೆದ ಕಾಂಗ್ರೆಸ್ಸ್, ಬಿಜೆಪಿ ವಿರುದ್ಧ ಪೇಸಿಎಂ ಅಸ್ತ್ರ ಪ್ರಯೋಗಿಸಿದ್ದರು.
ಸರ್ಕಾರಿ ಗುತ್ತಿಗೆಗಳನ್ನು ತೆಗೆದುಕೊಳ್ಳುವ ಗುತ್ತಿಗೆದಾರರಿಗೆ ಕೆಲವು ಸರ್ಕಾರಿ ಅಧಿಕಾರಿಗಳು ಇನ್ನೂ ಕಿಕ್ ಬ್ಯಾಕ್ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಡಿ.ಕೆಂಪಣ್ಣ ಮತ್ತೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆಂಪಣ್ಣ, ʼಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಶಾಸಕರು ಮತ್ತು ಸಂಸದರು ಸರ್ಕಾರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆಯುತ್ತಿದ್ದರು. ಈ ಸರ್ಕಾರದಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿದ್ದಾರೆʼ ಎಂದರು.
ಸರ್ಕಾರಕ್ಕೆ ಇದರಿಂದ ಕೆಟ್ಟ ಹೆಸರು ಬರುವುದನ್ನು ತಪ್ಪಿಸಲು ಈ ಅಧಿಕಾರಿಗಳ ಮೇಲೆ ನಿಗಾ ಇಡಬೇಕು ಎಂದು ಆಗ್ರಹಿಸಿರುವ ಅವರು, ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಿಲ್ಲ.