ಬೆಂಗಳೂರು: ಏಷ್ಯಾದ ಬೃಹತ್ ತಂತ್ರಜ್ಞಾನ ಸಮ್ಮೇಳನ ಬೆಂಗಳೂರು ಟೆಕ್ ಸಮ್ಮಿಟ್ 2023ಕ್ಕೆ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಬ್ರೇಕಿಂಗ್ ಬೌಂಡರೀಸ್ ಎಂಬ ಥೀಮ್ನೊಂದಿಗೆ ಉದ್ಘಾಟನೆಗೊಂಡ ಈ ಟೆಕ್ ಸಮ್ಮಿಟ್ ಬೆಂಗಳೂರಿನ ಅರಮನೆಯಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಈ ಟೆಕ್ ಸಮ್ಮಿಟ್ನಲ್ಲಿ ಒಟ್ಟು 30 ದೇಶಗಳ ಟೆಕ್ ನಾಯಕರು, ಸ್ಟಾರ್ಟಪ್ಗಳು ಹಾಗೂ ಹೂಡಿಕೆದಾರರು ಭಾಗಿಯಾಗಿದ್ದಾರೆ.
ಈ ಬಾರಿಯ ಟೆಕ್ ಶೃಂಗಸಭೆಯಲ್ಲಿ ಚಂದ್ರಯಾನ – 3, ಇಸ್ರೋ ಇಂಡಸ್ಟ್ರಿ ಪೆವಿಲಿಯನ್ ಪ್ರಮುಖ ಆಕರ್ಷಣೆಯಾಗಿವೆ. ಈ ಪೆವಿಲಿಯನ್ನಲ್ಲಿ ಬಾಹ್ಯಾಕಾಶದಲ್ಲಿ ಭಾರತದ ಸಾಧನೆಗಳ ಪ್ರದರ್ಶನ ನಡೆಯಲಿದೆ.