ಚಿತ್ರದುರ್ಗ: ದೇಶದೆಲ್ಲೆಡೆ ಟೊಮೆಟೊ ರೇಟ್ ಕುರಿತು ಕಳೆದ ಎರಡ್ಮೂರು ತಿಂಗಳಿನಿಂದ ಚರ್ಚೆಯಾಗುತ್ತಿತ್ತು. ಅಲ್ಲದೆ ಟೊಮೆಟೊ ಕಳ್ಳತನ ಹೆಚ್ಚಿ ರೈತರು, ಅಂಗಡಿ ಮಾಲೀಕರು ಬೆಳೆ ರಕ್ಷಣೆಗೆ ವಿವಿಧ ತಂತ್ರಗಳ ಮೊರೆ ಹೋಗುವಂತಾಗಿತ್ತು. ಇದೀಗ ಅದೇ ಸಾಲಿಗೆ ಈರುಳ್ಳಿ ಸೇರುವ ಲಕ್ಷಣ ತೋರುತ್ತಿದೆ.
ರಾಜ್ಯದ ಕೆಲವು ಪ್ರದೇಶಗಳಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಫಸಲು ಕೈಕೊಟ್ಟಿರುವುದು, ಕೆಲವು ಕಡೆಗಳಲ್ಲಿ ಮಳೆಯಿಲ್ಲದೆ ಸರಿಯಾಗಿ ಆಗದೇ ಬಿತ್ತನೆ ಆಗದಿರುವ ಕಾರಣ ಪೂರೈಕೆಯಲ್ಲಿ ತೊಂದರೆ ಉಂಟಾಗುತ್ತಿದೆ.
ಬೆಂಗಳೂರು ಎಪಿಎಂಸಿಯಲ್ಲಿ ಇದುವರೆಗೆ ಪ್ರತಿ ಕೆ.ಜಿ. ಈರುಳ್ಳಿ ಸರಾಸರಿ 25 ರೂ.ಗಳಿಗೆ ಮಾರಾಟವಾಗುತ್ತಿದ್ದದ್ದು ಮಂಗಳವಾರ ಕೆ.ಜಿ.ಗೆ 30ರಿಂದ 35 ರೂ.ಗಳಿಗೇರಿದೆ. ಉಳಿದ ಸಾಮಾನ್ಯ ಮಾರುಕಟ್ಟೆಗಳಲ್ಲಿ, ಅಂಗಡಿಗಳಲ್ಲಿ ಪ್ರತೀ ಕೆ.ಜಿ. ದಪ್ಪ ಈರುಳ್ಳಿಗೆ 30 ರೂ. ಇದ್ದದ್ದು 40ರಿಂದ 45 ರೂ.ಗಳಿಗೇರಿದೆ.
ಮಂಗಳವಾರ ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯಿಂದ ಬೆಂಗಳೂರಿಗೆ ಪೂರೈಕೆ ಆದ ದೊಡ್ಡ ಗಾತ್ರದ ಉತ್ತಮ ಗುಣಮಟ್ಟದ ಈರುಳ್ಳಿ ಕ್ವಿಂಟಾಲ್ಗೆ 2,800ರಿಂದ 3 ಸಾ. ರೂ. ವರೆಗೆ ಬಿಕರಿಯಾ ಯಿತು. ಹೀಗಾಗಿ ಹಳೆ ಈರುಳ್ಳಿಗೆ ಬೇಡಿಕೆ ಹೆಚ್ಚಿದೆ.
ಚಿತ್ರದುರ್ಗ, ಚಳ್ಳಕೆರೆ, ಅಜ್ಜಂಪುರ, ಹೂವಿನ ಹಡಗಲಿ ಮತ್ತಿತರ ಕಡೆಗಳಿಂದ ಅಧಿಕ ಪ್ರಮಾಣದಲ್ಲಿ ಈರುಳ್ಳಿ ಪೂರೈಕೆ ಆಗದ ಕಾರಣ ನಾಸಿಕ್ ಮತ್ತು ಅಹ್ಮದ್ ನಗರ್ ಜಿಲ್ಲೆಯಿಂದ ಉತ್ತಮ ಗುಣಮಟ್ಟದ ಹಳೆ ಈರುಳ್ಳಿ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪೂರೈಕೆ ಆಗುತ್ತಿದೆ. ಒಟ್ಟಿನಲ್ಲಿ ಟೊಮೆಟೊ ನಂತರ ಈರುಳ್ಳಿ ದರ ಏರಿಕೆ ರೈತರಿಗೆ ಖುಷಿ ಕೊಟ್ಟರೆ ಗ್ರಾಹಕರಲ್ಲಿ ಚಿಂತೆ ಮನೆ ಮಾಡುವಂತೆ ಆಗಿದೆ.