ಚಿತ್ರದುರ್ಗ: ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ರೂಪಿಸಿ ರೈತರಿಗೆ ಬೆಳೆ ವಿಮೆ ನೀಡುವ ಕೆಲಸವಾಗುತ್ತಿದೆ. ಬೀದರ್ ಜಿಲ್ಲೆ ಬೆಳೆ ವಿಮೆ ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಕೇಂದ್ರ ರಾಸಾಯನಿಕ ಹಾಗು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.
ಕೃಷಿಮೇಳ ಹಾಗು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಬೀದರ್ ಜಿಲ್ಲೆಯ ಬಹುತೇಕ ಜನ ರೈತರು ವಿಮೆ ಹಣ ಪಡೆದಿದ್ದಾರೆ. ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿವರ್ಷ 6 ಸಾವಿರ ರೂ. ಹಾಗೂ ರಾಜ್ಯ ಸರ್ಕಾರದ ವತಿಯಿಂದ ಪ್ರತಿ ವರ್ಷ 4 ಸಾವಿರ ರೂ.ಗಳನ್ನು ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ ಎಂದರು.
ಗೊಬ್ಬರ, ಕೀಟನಾಶಕ, ನೀರು ಇವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಾಗ ಮಣ್ಣಿನ ಫಲವತ್ತತೆ ಉಳಿದು ಮುಂದಿನ ಪೀಳಿಗೆಗೆ ಅನುಕೂವಾಗುತ್ತದೆ. ಇಲ್ಲದೇ ಹೋದಲ್ಲಿ ಮುಂದಿನ ಪೀಳಿಗೆಗೆ ಸಮಸ್ಯೆಯಾಗುತ್ತದೆ. ನಮ್ಮ ದೇಹದ ಆರೋಗ್ಯದ ರೀತಿ ಮಣ್ಣು, ಮರಗಳನ್ನು ಸಹ ಸಂರಕ್ಷಿಸಬೇಕು. ಕೇಂದ್ರ ಸರ್ಕಾರದಿಂದ ರೈತರಿಗೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ್ ಕೃಷಿಮೇಳ ಉದ್ಘಾಟಿಸಿ ಮಾತನಾಡಿ, ದೇಶಕ್ಕೆ ಉದ್ಯಮಿಗಳು ಅನ್ನ ಕೊಡಲು ಸಾಧ್ಯವಿಲ್ಲ. ಅನ್ನ ಕೊಡುವುದು ರೈತ ಮಾತ್ರ. ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬಂತೆ ಕೃಷಿಯನ್ನು ರಕ್ಷಿಸದಿದ್ದರೆ ಅಧೋಗತಿ ನಾಶ ಕಟ್ಟಿಟ್ಟಬುತ್ತಿ. ಇಸ್ರೇಲ್ ಮಾದರಿಗಿಂತ ಕೋಲಾರ ಮಾದರಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸಬೇಕು. ನಾವು ಬೆಳೆಯುವ ಬೆಳೆಗಳು ವಿಷಪೂರಿತವಾಗಿವೆ. ಕಾರಣ ನಾವು ಉಪಯೋಗಿಸುತ್ತಿರುವ ಮಿತಿಮೀರಿದ ರಾಸಾಯನಿಕ ಔಷಧಿಗಳ ಬಳಕೆ. ಅದನ್ನು ತಡೆಯಲು ಸಾವಯವ ಕೃಷಿಯಿಂದ ಸಾಧ್ಯ ಎಂದರು.
ಕೃಷಿಯಲ್ಲಿ ಯಂತ್ರೋಪಕರಣ ಉಪಯೋಗಿಸಿ ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಹೆಚ್ಚಿನ ಬೆಳೆ ಬೆಳೆಯಲು ಸಾಧ್ಯ. ಕೃಷಿಗೆ ಮೂಲಭೂತ ಸೌಕರ್ಯ ಒದಗಿಸಲು ಕೇಂದ್ರ ಸರ್ಕಾರ ಹಣವನ್ನು ಮೀಸಲಿಟ್ಟಿದೆ. ಆಹಾರ ಸಂಸ್ಕರಣ ಘಟಕ ನಿರ್ಮಾಣ ಮಾಡಲು ರೈತ ಉತ್ಪಾದಕ ಸಂಸ್ಥೆಗಳನ್ನು ನಿರ್ಮಾಣ ಮಾಡಲು ಸಹಾಯಧನ ನೀಡಲಾಗುತ್ತಿದೆ. ದಲ್ಲಾಳಿ ಕಡೆಯಿಂದ ರೈತರ ಮುಕ್ತರಾಗಲು ಸಂಸ್ಕರಣ ಘಟಕಗಳನ್ನು ಮಾಡಿಕೊಳ್ಳಬೇಕು. ರೈತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಲಿಡ್ಕರ್ ಅಧ್ಯಕ್ಷ ಪ್ರೊ.ಎನ್.ಲಿಂಗಣ್ಣ ಮಾತನಾಡಿ, 12ನೇ ಶತಮಾನದ ಬಸವಣ್ಣನವರಂತೆ ಇಂದು ಶ್ರೀಗಳು 21ನೇ ಶತಮಾನದಲ್ಲಿ ಅನೇಕ ಕ್ರಾಂತಿಕಾರಕ ಹೆಜ್ಜೆಯನ್ನಿಡುತ್ತಿದ್ದಾರೆ. ಕೃಷಿ ಪ್ರಧಾನ ದೇಶ ನಮ್ಮದು. ರೈತರು ಸಾಕಷ್ಟು ಬೆಳೆ ಬೆಳೆದರು ಸಹ ಅದನ್ನು ಮಾರುವ, ಉತ್ತಮ ಬೆಲೆ ಪಡೆಯುವಂತಹ ಅವಕಾಶ ಸಿಗಬೇಕಾಗಿದೆ. ಅದಕ್ಕೆ ನಾವುಗಳು ರೈತರ ಪರವಾಗಿ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕಾಗಿದೆ ಎಂದರು.
ಡಾ.ಶಿವಮೂರ್ತಿ ಮುರುಘಾ ಶರಣರು ಸಾನಿಧ್ಯ ವಹಿಸಿ ಮಾತನಾಡಿ, ಕೊಯ್ಲೋತ್ತರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರ ಫಸಲು ಖರೀದಿಸಲು ಮುಂದಿನ ಬಜೆಟ್ನಲ್ಲಿ 5,000 ಕೋಟಿ ಆವರ್ತನಿಧಿಯನ್ನು ಮೀಸಲಿರಿಸಬೇಕು. ರಾಜ್ಯಾದ್ಯಾಂತ ಮೆಕ್ಕೆಜೋಳವನ್ನು ಬೆಳೆಯುತ್ತಿರುವುದರಿಂದ ಕೇಂದ್ರ ಸರ್ಕಾರ ನಿಗಧಿಪಡಿಸುವ ಬೆಂಬಲ ಬೆಲೆಯಲ್ಲಿ ಖರೀದಿಸಲು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆಯಬೇಕು ಎಂದರು.
ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಶರಣ ಸಂಸ್ಕೃತಿ ಉತ್ಸವದ ಗೌರವಾಧ್ಯಕ್ಷರಾದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಕಾರ್ಯಾಧ್ಯಕ್ಷಚ ಕೆ.ಎಸ್.ನವೀನ್, ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ, ಕೃಷಿ ಆರ್ಥಿಕ ತಜ್ಞರಾದ ಪ್ರೊ.ಟಿ.ಎಂ.ವೆಂಕಟರೆಡಿ, ಶರಣ ಸಂಸ್ಕೃತಿ ಉತ್ಸವ-೨೦೨೧ರ ಕಾರ್ಯಾಧ್ಯಕ್ಷರಾದ ಶ್ರೀ ಕೆ ಎಸ್ ನವೀನ್ ಮತ್ತಿತರರು ಹಾಜರಿದ್ದರು.