ಚಿತ್ರದುರ್ಗ: ಹೊಸದುರ್ಗದ ಸಾಣೇಹಳ್ಳಿಯಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. “ಯಾವುದೇ ಊರಲ್ಲಿ ಏನಾದರೂ ಒಳ್ಳೆಯ ಕಾರ್ಯಕ್ರಮ ನಡೆದರೆ ಗಣಪತಿ ಪೂಜೆಯಿಂದ ಆರಂಭ ಮಾಡುತ್ತೀರಿ. ಗಣಪತಿ ನಮ್ಮ ಸಂಸ್ಕೃತಿ ಅಲ್ಲ, ಆದರೂ ಕೂಡ ಬಹಳ ಜನ ಅದೇ ಪರಂಪರೆಯಲ್ಲಿ ಮುಂದುವರೆದಿದ್ದಾರೆ. ಏನಾದರೂ ಪ್ರಾರ್ಥನೆ ಮಾಡಿ ಎಂದು ಹೇಳಿದರೆ ಊರುಗಳಲ್ಲಿ ಗಣಪತಿ ಅಂತಾನೇ ಶುರುವಾಗಿಬಿಡುತ್ತೆ ಎಂದರು.
ಆದರೆ ನಮ್ಮ ಗುರುಗಳು ಎಲ್ಲ ಪರಂಪರೆಯನ್ನು ಬದಲಾಯಿಸಿ ಪ್ರಾರ್ಥನೆ ಎಂದರೆ ವಚನಗಳನ್ನೇ ಹಾಡಬೇಕು ಎನ್ನುವ ಪದ್ದತಿಯನ್ನು ಜಾರಿಗೆ ತಂದರು. ಇಡೀ ದೇಶ, ನಮ್ಮ ರಾಜ್ಯದಲ್ಲಿ ವಚನಗಳನ್ನು ಹಾಡಬಹುದು ಎಂದು ತೋರಿಸಿಕೊಟ್ಟವರು ನಮ್ಮ ಪೂಜ್ಯ ಶಿವಕುಮಾರ ಶಿವಾಚಾರ್ಯ ಸ್ವಾಮಿಜಿ. ಆ ಗುರುಗಳು ಯಾವುದೇ ಕಾರ್ಯಕ್ರಮ ಮಾಡಿದರೆ ಶಿವಧ್ವಜದ ಮೂಲಕ ಆರಂಭ ಮಾಡುತ್ತಿದ್ದರು. ಈಗಲೂ ಸಾಣೆಹಳ್ಳಿಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೆ ಅದು ಶಿವಧ್ವಜದ ಮೂಲಕ ಪ್ರಾರಂಭ ಆಗುತ್ತದೆ ಎಂದಿದ್ದಾರೆ. ಸದ್ಯ ಹೇಳಿಕೆ ಚರ್ಚೆಗೆ ಕಾರಣವಾಗಿದೆ.