ಚಿತ್ರದುರ್ಗ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಆರೋಪಿಗೆ ಇಲ್ಲಿನ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 30ಸಾವಿರ ರೂ. ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಆರೋಪಿ ಪರಶುರಾಮ ಎಂಬಾತ ಆಟೋ ಚಾಲಕ ಶಿವರಾಜ ಎಂಬ ವ್ಯಕ್ತಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿ ರಾಮಗಿರಿ ರೈಲ್ವೆ ನಿಲ್ದಾಣದ ಬಳಿಯ ರೈಲು ಹಳಿಯ ಮೇಲೆ ಹಾಕಿದ್ದನು. ತನ್ನ ಹೆಂಡತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಕಾರಣಕ್ಕೆ ಆರೋಪಿ ಪರಶುರಾಮ, ಆಟೋಚಾಲಕ ಶಿವರಾಜನನ್ನು ಕೊಲೆ ಮಾಡಿದ್ದ.
ರೈಲ್ವೆ ಹಳಿಯ ಬಳಿ ಬಿದ್ದಿದ್ದ ಶವವನ್ನು ಮೃತ ಶಿವರಾಜನ ತಂದೆ ಗುರುತು ಹಿಡಿದು, ಪರಶುರಾಮ ಕೊಲೆ ಮಾಡಿರುವ ಕುರಿತು ಸಂಶಯ ವ್ಯಕ್ತಪಡಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿದ ದಾವಣೆಗೆ ರೈಲ್ವೆ ಪೊಲೀಸರು, ಆರೋಪಿ ಪರಶುರಾಮನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ತನಿಖೆಯಿಂದ ಪ್ರಕರಣದ ಸತ್ಯ ತಿಳಿದುಬಂದಿತ್ತು.
ಪ್ರಕರಣ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹನುಮಂತಪ್ಪ ಆರ್. ಬನ್ನಿಕಟ್ಟಿ ಆರೋಪಿತನಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.