News Karnataka Kannada
Wednesday, May 01 2024
ಚಿಕ್ಕಬಳ್ಳಾಪುರ

ಟೊಮೆಟೊ ಬೆಲೆ ಏರಿಕೆ, ಬೆಳೆಗಾರರ ಮುಖದಲ್ಲಿ ಮಂದಹಾಸ

Tomato
Photo Credit :

ಚಿಂತಾಮಣಿ : ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆ ಚೇತರಿಸಿಕೊಂಡು ಏರಿಕೆ ಕಾಣುತ್ತಿದೆ. ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ಸುಮಾರು 20 ದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದ ಬೆಳೆಗಳು ಹಾಳಾಗಿ ಮಾರುಕಟ್ಟೆಗೆ ಹಣ್ಣು ಆವಕ ಕಡಿಮೆಯಾಗಿದೆ.

ಬುಧವಾರ ಮಾರುಕಟ್ಟೆಯಲ್ಲಿ 15 ಕೆ.ಜಿ ಬಾಕ್ಸ್ ಗುಣಮಟ್ಟಕ್ಕೆ ಅನುಗುಣವಾಗಿ ₹700-1,100ವರೆಗೂ ಮಾರಾಟವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 1 ಕೆ.ಜಿ ₹70-100ವರೆಗೂ ಮಾರಾಟವಾಗುತ್ತಿದೆ. ಬೆಲೆ ಕುಸಿತದ ಕಾಲದಲ್ಲಿ ಆಯ್ದು ಬಿಸಾಡುತ್ತಿದ್ದ ಟೊಮೆಟೊಗೂ ಬಾಕ್ಸ್‌ಗೆ ₹700ಬೆಲೆ ಸಿಗುತ್ತಿದೆ.

ಒಂದು ತಿಂಗಳಿನಿಂದ ದಿನ-ದಿನವೂ ಬೆಲೆ ಏರಿಕೆಯಾಗುತ್ತಿದೆ. ತಿಂಗಳಿನಿಂದ ಮಳೆಯಾಗುತ್ತಿರುವುದರಿಂದ ಟೊಮೆಟೊ ತೋಟಗಳು ಹಾಳಾಗಿವೆ. ತೋಟಗಳಲ್ಲಿ ನೀರು ನಿಂತು ತೇವಾಂಶ ಅಧಿಕವಾಗಿ ಗಿಡಗಳು ಹಾಗೂ ಅವುಗಳಲ್ಲಿದ್ದ ಹಣ್ಣುಗಳು ಕೊಳೆತು ನಾರುತ್ತಿವೆ. ಎತ್ತರದ ಪ್ರದೇಶ, ಗಡಸು ಭೂಮಿಗಳಲ್ಲಿ ಬೆಳೆದ ಟೊಮೆಟೊ ಮಾತ್ರ ಅಲ್ಪ-ಸ್ವಲ್ಪ ಉಳಿದುಕೊಂಡಿದ್ದು ಮಾರುಕಟ್ಟೆಗೆ ಬರುತ್ತಿದೆ.

ಎರಡು ವರ್ಷಗಳಿಂದ ಟೊಮೆಟೊಗೆ ಉತ್ತಮ ಧಾರಣೆ ಸಿಕ್ಕಿರಲಿಲ್ಲ. ಜೂನ್-ಜುಲೈ ತಿಂಗಳಲ್ಲಿ ಬೆಲೆ ಕುಸಿದಿದ್ದು 15 ಕೆ.ಜಿ ₹30-110ಕ್ಕೆ ಮಾರಾಟವಾಗುತ್ತಿತ್ತು. ಹಣ್ಣನ್ನು ಕಿತ್ತು ಮಾರುಕಟ್ಟೆಗೆ ಸಾಗಾಟ ಮಾಡುವ ವೆಚ್ಚವೂ ದೊರೆಯುತ್ತಿರಲಿಲ್ಲ. ಅನೇಕ ರೈತರು ಹಣ್ಣನ್ನು ಕೊಯ್ಲು ಮಾಡದೆ ತೋಟಗಳಲ್ಲೇ ಬಿಟ್ಟಿದ್ದರು. ಗಿಡಗಳ ಸಮೇತ ಉಳುಮೆ ಮಾಡಿ ಮಣ್ಣಿಗೆ ಸೇರಿಸಿದ್ದರು. ಕಂಗಾಲಾಗಿದ್ದ ರೈತರು ಟೊಮೆಟೊ ಬೆಳೆಗೆ ವಿದಾಯ ಹೇಳಿ ಬೇರೆ ಬೆಳೆಗಳಿಗೆ ಮಾರುಹೋಗಿದ್ದರು.

ನದಿ, ನಾಲೆ ಸೇರಿದಂತೆ ಯಾವುದೇ ಶಾಶ್ವತ ನೀರಾವರಿ ಮೂಲಗಳಿಲ್ಲ. ಅಂತರ್ಜಲ ತೀವ್ರವಾಗಿ ಕುಸಿದಿದೆ. 1500 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಸಿಗುವ ಅಲ್ಪ-ಸ್ವಲ್ಪ ನೀರಿನಿಂದಲೇ ಶ್ರಮಪಟ್ಟು ಟೊಮೆಟೊ ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ರೈತರು ನಾಲ್ಕು ಕಾಸು ಸಂಪಾದನೆ ಮಾಡುತ್ತಾರೆ.

ನಿರಂತರವಾಗಿ ಬೆಲೆ ಕುಸಿತದಿಂದ ರೈತರು ಟೊಮೆಟೊ ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ. ಜತೆಗೆ ಮಳೆಯಿಂದಾಗಿ ಬೆಳೆ ಕಡಿಮೆಯಾಗಿದೆ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ. ಬೆಲೆ ಏರಿಕೆಯಾಗುತ್ತಿರುವುದು ರೈತರಿಗೆ ಸಂತೋಷ ತಂದಿದೆ. ಕಳೆದ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಟೊಮೆಟೊ ಬೆಲೆ ತೀವ್ರ ಕುಸಿತದಿಂದ ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದರು. ರಾಜ್ಯದಲ್ಲೇ ದೊಡ್ಡ ಟೊಮೆಟೊ ಮಾರುಕಟ್ಟೆ ಹೊಂದಿರುವ ಇಲ್ಲಿನ ಎಪಿಎಂಸಿಯಲ್ಲಿ ಯಾವಕಡೆಗೆ ದೃಷ್ಟಿ ಹಾಯಿಸಿದರೂ ಟೊಮೆಟೊ ರಾಶಿಗಳು ಕಾಣುತ್ತಿದ್ದವು.

ಪ್ರತಿನಿತ್ಯ ಸುಮಾರು 70-80 ಲೋಡ್ ಪೂರೈಕೆ ಆಗುತ್ತಿತ್ತು. ಈಗ ಕೇವಲ 20 ಲೋಡ್‌ಗೆ ಇಳಿದಿದೆ. ದೆಹಲಿ, ಲಕ್ನೋ, ಕಾನ್ಪುರ, ಬನಾರಸ್, ಮಹಾರಾಷ್ಟ್ರ, ತಮಿಳುನಾಡು, ಕೇರಳ, ವಿಜಯವಾಡಕ್ಕೆ ರವಾನೆಯಾಗುತ್ತಿದೆ ಹಾಗೂ ಸ್ಥಳೀಯವಾಗಿ ಮಾರಾಟವಾಗುತ್ತಿದೆ ಎಂದು ಪ್ರಮುಖ ಟೊಮೆಟೊ ವ್ಯಾಪಾರಿ ಊಲವಾಡಿ ವಿ.ಕೃಷ್ಣಪ್ಪ ತಿಳಿಸಿದರು.

ಅಪರೂಪಕ್ಕೊಮ್ಮೆ ಬೆಲೆ ಸಿಗುತ್ತದೆ. ಬೆಳೆ ಉತ್ತಮವಾಗಿದ್ದು ಇಳುವರಿ ಚೆನ್ನಾಗಿದ್ದಾಗ ಬೆಲೆ ಇರುವುದಿಲ್ಲ. ಬೆಲೆ ಇದ್ದಾಗ ಬೆಳೆ ಇಲ್ಲದೆ ರೈತರು ಕೈ ಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಬೆಳೆಗಾರರೂ ಕಡಿಮೆ, ಮಳೆಯಿಂದ ಬೆಳೆ ಹಾಳಾಗಿದೆ. ಹೀಗಾಗಿ ಉತ್ತಮ ಬೆಲೆ ಸಿಗುತ್ತಿದೆ. ಆದರೆ ಬೆಲೆ ಏರಿಕೆಯ ಲಾಭ ಪಡೆಯಲು ರೈತರಲ್ಲಿ ಟೊಮೆಟೊ ತೋಟಗಳೇ ಇಲ್ಲ ಎನ್ನುತ್ತಾರೆ ರೈತ ಸಂಘದ ಮುಖಂಡ ಸೀಕಲ್ ರಮಣಾರೆಡ್ಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು