ಬೆಂಗಳೂರು: ಚಂದ್ರಯಾನ-3 ಮಿಷನ್ನ ಯಶಸ್ಸಿಗಾಗಿ ಪ್ರಾರ್ಥಿಸಿ ರಾಜ್ಯದ ಜನರು ಬುಧವಾರ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ರಾಯಚೂರು ನಗರದ ಎನ್ಐಜಿ ಕಾಲೋನಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ 20 ಕ್ಕೂ ಹೆಚ್ಚು ಮಕ್ಕಳು ಶಿವಲಿಂಗಕ್ಕೆ ‘ಪಂಚಾಮೃತ ಅಭಿಷೇಕ’ ಅರ್ಪಿಸಿದರು. ಅಲ್ಲದೆ ಮಕ್ಕಳು ದೇವರ ಮುಂದೆ ಸ್ತೋತ್ರಗಳನ್ನು ಪಠಿಸಿದರು.
1008 ಶ್ರೀಶೈಲ ಮಠಾಧೀಶ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಚಂದ್ರಯಾತ್ರೆ ಯಶಸ್ವಿಯಾಗಲೆಂದು ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಳೆದ ಬಾರಿ ಮಿಷನ್ ಯಶಸ್ವಿಯಾಗಿರಲಿಲ್ಲ. ಈ ಬಾರಿ ದೇವರ ಆಶೀರ್ವಾದದಿಂದ ಚಂದ್ರಯಾನ -3 ಮಿಷನ್ ಯಶಸ್ವಿಯಾಗಲಿ ಎಂದು ಅವರು ಹೇಳಿದ್ದಾರೆ. ಅಲ್ಲದೆ ಇಸ್ರೋ ತಂಡದ ಕಾರ್ಯಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.
ಬಿಜೆಪಿ ಶಾಸಕ ಟಿ.ಎಸ್ ನೇತೃತ್ವದ 82 ಜನರ ತಂಡ ಮಂತ್ರಾಲಯದಲ್ಲಿ ಚಂದ್ರಯಾನ – 3 ಮಿಷನ್ನ ಯಶಸ್ಸಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಜ್ಞಾನಿಗಳಿಗೆ ಜೈಕಾರ ಕೂಗಿದ್ದಾರೆ.
ಬಾಳೆಹೊನ್ನೂರು ರಂಭಾಪುರಿ ಶ್ರೀಗಳು ಇಸ್ರೋ ಕಾರ್ಯಕ್ಕೆ ಶುಭ ಹಾರೈಸಿದ್ದಾರೆ. ಇಂದು ಇಡೀ ಜಗತ್ತು ಭಾರತದತ್ತ ಮುಖ ಮಾಡುತ್ತಿದೆ. ನಮ್ಮ ವಿಜ್ಞಾನಿಗಳ ಕಾರ್ಯ ಇತರರಿಗೆ ಮಾದರಿಯಾಗಲಿ. ವಿಜ್ಞಾನಿಗಳ ಬೆನ್ನಿಗೆ ನಿಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ಇಸ್ರೋ ತಂಡದಲ್ಲಿ ಬಾಳೆಹೊನ್ನೂರಿನ ಕೇಶವಮೂರ್ತಿ ಮತ್ತು ಮಂಗಳಾ ದಂಪತಿಯ ಪುತ್ರಿ ಡಾ.ಕೆ.ನಂದಿನಿ ಕೂಡ ಇರುವುದು ಹೆಮ್ಮೆ ಎಂದು ತಿಳಿಸಿದ್ದಾರೆ.