ಬೆಂಗಳೂರು: ಕಳೆದ ಕೆಲವೇ ಕೆಲವು ದಿನಗಳಲ್ಲಿ ರಾಜ್ಯದ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತಿವೆ. ಸಮೀಕ್ಷೆಗಳ ಪ್ರಕಾರ ಬಿಜೆಪಿ ಮುನ್ನಲೆಗೆ ಬಂದಿದೆ. ಆದರೂ ಮತದಾನದ ದಿನದ ತನಕವೂ ಬದಲಾವಣೆಗಳು ಆಗುತ್ತಲೇ ಇರುತ್ತದೆ.
ಚುನಾವಣೆ ಸಮಯದಲ್ಲಿ ಚಿಕ್ಕ ಚಿಕ್ಕ ವಿಚಾರಗಳು ದೊಡ್ಡದಾದ ಬದಲಾವಣೆಗೆ ಕಾರಣವಾಗುತ್ತವೆ ಎನ್ನುವುದು ಗೊತ್ತಿರುವ ವಿಚಾರವೇ.. ಅದರಲ್ಲೂ ಬಿಜೆಪಿಗರ ಕೈಗೆ ಜಾತಿ, ಧರ್ಮದ ವಿಚಾರಗಳು ಸಿಕ್ಕರೆ ಅದನ್ನು ಯಾವ ರೀತಿಯಲ್ಲೆಲ್ಲ ಬಳಸಿಕೊಳ್ಳುತ್ತಾರೆ ಎಂಬುದು ಸ್ವತಃ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲದ ವಿಚಾರವೇನಲ್ಲ.
2018ರಲ್ಲ ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಬಿಂಬಿಸುವ ಮೂಲಕವೇ ಅಧಿಕಾರದಲ್ಲಿದ್ದ ಕಾಂಗ್ರೆಸ್ ಬಹುಮತ ಪಡೆಯದಂತೆ ಮಾಡಲಾಗಿತ್ತು. ಹೀಗಿದ್ದರೂ ಕಾಂಗ್ರೆಸ್ ಕಳೆದೆರಡು ವರ್ಷಗಳಿಂದ ಬಿಜೆಪಿ ಸರ್ಕಾರದ ವಿರುದ್ಧ ಸೃಷ್ಟಿ ಮಾಡಿದ್ದ ಆಡಳಿತ ವಿರೋಧಿ ಅಲೆ ಚುನಾವಣೆ ಸಮೀಪಿಸುವಾಗಲೇ ಎಲ್ಲೋ ಒಂದು ಕಡೆ ಕೊಚ್ಚಿ ಹೋಯಿತಾ? ಎಂಬ ಅನುಮಾನಗಳು ಹುಟ್ಟಿಕೊಳ್ಳಲು ಶುರುವಾಗಿದೆ.
ಇದೆಕ್ಕೆಲ್ಲ ಕಾರಣವಾಗಿರುವುದು ರಾಜ್ಯಕ್ಕೆ ಮೋದಿ ಎಂಟ್ರಿ ಎಂದರೆ ಒಪ್ಪಿಕೊಳ್ಳಬೇಕು. ಮತ್ತು ಅದೇ ವೇಳೆಗೆ ಕಾಂಗ್ರೆಸ್ಸಿಗರು ಬಿಡುಗಡೆ ಮಾಡಿದ ಭಜರಂಗದಳ ನಿಷೇಧದ ಪ್ರಣಾಳಿಕೆ ಮತ್ತು ಅದನ್ನು ಮೋದಿಯವರು ಪ್ರಚಾರಕ್ಕೆ ಬಳಸಿಕೊಂಡಿರುವ ರೀತಿಯೂ ಅದ್ಭುತವಾಗಿದೆ. ಇದೀಗ ರಾಜ್ಯದಲ್ಲಿ ಜೈಭಜರಂಗಬಲಿ ಟ್ರೆಂಡ್ ಶುರುವಾಗಿದೆ.
ಸಾಮಾಜಿಕ ಜಾಲ ತಾಣಗಳು ಸೇರಿದಂತೆ ಬಿಜೆಪಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಜೈಭಜರಂಗಬಲಿ ಘೋಷಣೆಯೊಂದಿಗೆ ಕಾರ್ಯಕ್ರಮ ಶುರುವಾಗುತ್ತಿದೆ. ಇದರ ನಡುವೆ ಹಿಂದೂಪರ ಸಂಘಟನೆಗಳು ಕೂಡ ಹೋರಾಟಗಳನ್ನು ನಡೆಸುತ್ತಿವೆ. ಇದೆಲ್ಲ ಬೆಳವಣಿಗೆಗಳು ಕೆಲವೇ ಕೆಲವು ದಿನಗಳಲ್ಲಿ ಆಗಿದ್ದು. ಆದರೆ ಇದಕ್ಕೂ ಮೊದಲು ಹೀಗಿತ್ತಾ ಖಂಡಿತಾ ಇಲ್ಲ.
ಕಳೆದ ಕೆಲವು ದಿನಗಳ ಹಿಂದೆ ನಡೆದಂತಹ ಸಮೀಕ್ಷೆಗಳು ಕಾಂಗ್ರೆಸ್ಸಿಗರಲ್ಲಿ ಆಶಾಭಾವನೆಯನ್ನು ಹುಟ್ಟುಹಾಕಿದ್ದವು. ನಾವೇ ಅಧಿಕಾರ ಹಿಡಿಯುತ್ತೇವೆ ಎಂಬ ಹುಮ್ಮಸ್ಸಿನಲ್ಲಿಯೇ ಕಾಂಗ್ರೆಸ್ಸಿಗರು ಕೆಲಸ ಮಾಡಿಕೊಂಡು ಬಂದಿದ್ದರು. ಇದೆಲ್ಲದರ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ ಸಿಎಂ ವಿಚಾರಗಳು ಕೂಡ ಮುನ್ನಲೆಗೆ ಬಂದಿದ್ದವು. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅದನ್ನು ಬದಿಗೊತ್ತಿ ನಾಯಕರೆಲ್ಲರೂ ನಾವೆಲ್ಲರೂ ಒಂದೇ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸಿಕೊಡುವ ಪ್ರಯತ್ನ ಮಾಡಿದರಲ್ಲದೆ ಅದರಲ್ಲಿ ಸಫಲರೂ ಆಗಿದ್ದರು.
ಹಾಗೆನೋಡಿದರೆ ಕಳೆದೊಂದು ವರ್ಷದ ಹಿಂದೆಯೇ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದ ಕಾಂಗ್ರೆಸ್ ಪ್ರತಿ ಹೆಜ್ಜೆಗೂ ಅಡ್ಡಗಾಲಾಗಿ ಪರಿಣಮಿಸಿತ್ತು. ಅಷ್ಟೇ ಅಲ್ಲದೆ, ಸರ್ಕಾರದ ವಿರುದ್ಧ ಜನರಲ್ಲಿ ಅವಿಶ್ವಾಸ ಮೂಡಿಸಿ ಜನವಿರೋಧಿ ಧೋರಣೆ ಸೃಷ್ಟಿಸುವ ಉದ್ದೇಶವೂ ಫಲಪ್ರದವಾಗಿತ್ತು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳುವ ಕೆಲಸಕ್ಕೂ ಮುಂದಾಗಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಒಟ್ಟಾಗಿ ಕಾಣಸಿಕೊಂಡು ಪಾದಯಾತ್ರೆ ನಡೆಸಿದರು. ಆ ಮೂಲಕ ಇದು ಪಕ್ಷಕ್ಕೆ ಶಕ್ತಿ ಜತೆಗೆ ಕಾರ್ಯಕರ್ತರಿಗೆ ಹುಮ್ಮಸ್ಸು ತುಂಬುವ ಕೆಲಸ ಮಾಡಿದರು.
ಇನ್ನು ಚುನಾವಣೆಗೆ ಕೆಲವೇ ಕೆಲವು ದಿನಗಳು ಬಾಕಿಯಿರುವಾಗಲೇ ಕಾಂಗ್ರೆಸ್ ಹಲವು ಆಕರ್ಷಕ ಮತ್ತು ಮತದಾರರನ್ನು ಸೆಳೆಯುವಂತಹ ಯೋಜನೆಗಳ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಈ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹತ್ತು ಹಲವು ಯೋಜನೆಗಳನ್ನು ಪ್ರಸ್ತಾಪ ಮಾಡಿತ್ತು. ಆದರೆ ಆ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವ ವಿಚಾರದ ಪ್ರಸ್ತಾಪ ಎಲ್ಲೋ ಒಂದು ಕಡೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಅದೊಂದೇ ವಿಚಾರ ಪ್ರಣಾಳಿಕೆಯಲ್ಲಿದ್ದ ಇತರೆ ವಿಚಾರಗಳನ್ನು ನಗಣ್ಯ ಮಾಡಿಬಿಟ್ಟಿತು.
ಈಗಿನ ಸ್ಥಿತಿಯಲ್ಲಿ ಬಿಜೆಪಿಗರು ಜೈಭಜರಂಗಬಲಿ ಎನ್ನುತ್ತಾ ಮತದಾರರ ಬಳಿಗೆ ಹೋಗುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳು ಭಾರೀ ಮಹತ್ವಪಡೆದುಕೊಳ್ಳುತ್ತವೆ. ಹೀಗಿರುವಾಗ ಕಾಂಗ್ರೆಸ್ ನಾಯಕರು ಆಗಿರುವ ಡ್ಯಾಮೇಜ್ ಕಂಟ್ರೋಲ್ ಗೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಾರೆ? ಇದೀಗ ರಾಹುಲ್ ಗಾಂಧಿ ಅವರು ಮಾಡುತ್ತಿರುವ ತಂತ್ರಗಳು ಫಲಕೊಡುತ್ತವೆಯಾ ಕಾದುನೋಡಬೇಕಿದೆ.