ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಡೈನರ್ಜಿಕ್ ಬಿಸಿನೆಸ್ ಸೊಲ್ಯೂಷನ್ ಸಂಸ್ಥೆಯ 11 ನೇ ಆವೃತ್ತಿಯ ಗೋಲ್ಡನ್ ಏಮ್ ಕಾನ್ಫರೆನ್ಸ್ ನಗರದ ಸ್ಯಾಂಕ್ಟಮ್ ಹೋಟೆಲ್ ನಲ್ಲಿ ಫೆಬ್ರವರಿ 26ರಂದು ಜರುಗಿತು.
ಈ ಸಂದರ್ಭದಲ್ಲಿ ಮೋಸ್ಟ್ ಟ್ರಸ್ಟೆಡ್ ಹೆಲ್ತ್ ಕೇರ್ ಲೀಡರ್ಶಿಪ್ ಅವಾರ್ಡ್ – ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಅವಾರ್ಡ್ ವಿಭಾಗದ ಪ್ರಶಸ್ತಿಯು ಹೃದ್ರೋಗ ಕ್ಷೇತ್ರದಲ್ಲಿ 2 ದಶಕಗಳಿಂದ ಸೇವೆ ಸಲ್ಲಿಸಿ ಸಹಸ್ರಾರು ರೋಗಿಗಳ ಬದುಕಿನಲ್ಲಿ ಬೆಳಕಾಗಿ ಹೃದ್ರೋಗ ಕ್ಷೇತ್ರದಲ್ಲಿ ಹಲವು ಹೊಸತನಗಳಿಗೆ ಸಾಕ್ಷಿಯಾಗಿರುವ ಮಂಗಳೂರು ಕೆ ಎಂ ಸಿ ಯ ಹೃದ್ರೋಗ ವಿಭಾಗದಲ್ಲಿ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ ನರಸಿಂಹ ಪೈ ಇವರಿಗೆ ಒಲಿಯಿತು.
ಇಂಡಿಯನ್ ರೇಡಿಯೋಲೋಜಿಕಲ್ ಮತ್ತು ಇಮೇಜಿಂಗ್ ಅಸೋಸಿಯೇಷನ್ ನ ಕರ್ನಾಟಕ ಘಟಕದ ಅಧ್ಯಕ್ಷರೂ, ಶ್ರೀ ಸಿದ್ಧಾರ್ಥ ಯುನಿವರ್ಸಿಟಿಯ ವೈಸ್ ಚಾನ್ಸಲರ್ ಆದ ಬೆಂಗಳೂರಿನ ಹಿರಿಯ ಖ್ಯಾತ ರೇಡಿಯೋಲಜಿಸ್ಟ್ ಆದ ಡಾಕ್ಟರ್ ಪ್ರಭಾಕರ್ ಶೆಟ್ಟಿ ಇವರು ಡಾಕ್ಟರ್ ಪೈ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಾಧಕರಾದ ಡಾಕ್ಟರ್ ಪೈ ಅವರು ವೈದ್ಯಕೀಯ ವೃತ್ತಿ ಅದರಲ್ಲೂ ಹೃದ್ರೋಗ ತಜ್ಞರಾಗಿ ಸೇವೆ ಸಲ್ಲಿಸುವಂತಹ ವೈದ್ಯರು ದಿನದ 24 ಗಂಟೆಯನ್ನು ಸಮಾಜಕ್ಕಾಗಿ ಮುಡಿಪಾಗಿಡುವುದು ಆದ್ಯತೆಯಾಗಿರುತ್ತದೆ. ನಾವು ಬಿಡುವು ರಹಿತರಾಗಿ ಸಮರ್ಪಣಾ ಮನೋಭಾವದಿಂದ ಸಲ್ಲಿಸುವ ಕಾಯಕ ಸೇವೆಯು ಆರೋಗ್ಯವಂತ ಸಮಾಜಕ್ಕಾಗಿಯೇ ಹೊರತು ಯಾವುದೇ ಪ್ರಶಸ್ತಿ ಅಥವಾ ಪ್ರಶಸ್ತಿಯ ನಿರೀಕ್ಷೆಯಲ್ಲಿ ಅಲ್ಲ. ನಮ್ಮ ವೈದ್ಯ ವೃತ್ತಿಯ ಶ್ರೇಷ್ಠತೆಯನ್ನು, ವೈದ್ಯರ ಕರ್ತವ್ಯ ನಿಷ್ಠೆಯನ್ನು, ವೈದ್ಯರನ್ನು ಸಮಾಜವು ಗೌರವಿಸುವ ರೀತಿಯನ್ನು “ವೈದ್ಯೊ ನಾರಾಯಣ ಹರಿಃ” ಈ ಅಷ್ಟ ಅಕ್ಷರಗಳು ವಿಶ್ಲೇಷಿಸುತ್ತದೆ.
ಆದರೆ ನಮ್ಮ ಕಾಯಕ ಬದುಕಿನ ಸಮರ್ಪಣಾ ಮನೋಭಾವಕ್ಕೆ ಶ್ರೇಷ್ಠ ಆದರ್ಶಪ್ರಾಯ ಸಂಸ್ಥೆಗಳಿಂದ ಹುಡುಕಿಕೊಂಡು ಬರುವಂತಹ ಪ್ರಶಸ್ತಿಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ. ಹೃದ್ರೋಗ ಕ್ಷೇತ್ರದಲ್ಲಿ ಮತ್ತಷ್ಟು ಹೊಸತನಗಳಿಗೆ ನಮ್ಮನ್ನು ತೊಡಗಿಸಿಕೊಳ್ಳಲು ಸ್ಪೂರ್ತಿಯಾಗುತ್ತದೆ.
ಶ್ರೇಷ್ಠ ಸಾಧಕರೂ ಹಿರಿಯ ವೈದ್ಯರೂ ಆದ ಡಾಕ್ಟರ್ ಪ್ರಭಾಕರ್ ಶೆಟ್ಟಿ ಇವರಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲು ಬಹಳ ಸಂತೋಷವಾಗುತ್ತದೆ. ಪ್ರಶಸ್ತಿ ನೀಡಿ ಗೌರವಿಸಿದ ಸಂಘಟಕರಿಗೆ ತಮ್ಮ ಮನದಾಳದ ವಂದನೆಗಳನ್ನು ಸಲ್ಲಿಸಿದರು.
ಈ ಸ್ಮರಣೀಯ ಕ್ಷಣಗಳಲ್ಲಿ ತನಗೆ ಉನ್ನತ ಶಿಕ್ಷಣವನ್ನು ನೀಡಿದ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಸಂಸ್ಥೆಗೆ, ಕಲಿಸಿದ ಎಲ್ಲಾ ಪ್ರಾಧ್ಯಾಪಕರಿಗೆ, ಸಹೋದ್ಯೋಗಿ ಮಿತ್ರರಿಗೆ ಹಾಗೂ ಕೆಎಂಸಿಯ ಆಡಳಿತ ಮಂಡಳಿಗೆ ಕೃತಜ್ಞತೆಗಳನ್ನು ಸಲ್ಲಿಸಲು ಡಾಕ್ಟರ್ ನರಸಿಂಹ ಪೈಯವರು ಮರೆಯಲಿಲ್ಲ.