ಬೆಂಗಳೂರು: ಕರ್ನಾಟಕ ರಾಜ್ಯದ ನೆಲ,ಜಲ ಮತ್ತು ಭಾಷೆಯ ಆಸ್ಮಿತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಬಹಳ ಹಿರಿದು ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹೇಳಿದರು.
ಇಂದು ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಕನ್ನಡಿಗರ ಸಮ್ಮಿಲನದಲ್ಲಿ ಪಾಲ್ಗೊಂಡು ಮಾತನಾಡಿದರು. ಒಂದು ಸಂಘಟನೆಯನ್ನ ಪ್ರಾರಂಭಿಸಿ ಬೆಳೆಸುವುದು ಅಷ್ಟು ಸುಲಭ ಕಾರ್ಯ ಅಲ್ಲ. ಸಂಘಟನೆಯಲ್ಲಿ ಕಾರ್ಯಕರ್ತರನ್ನು ಉಳಿಸಿಕೊಳ್ಳುವುದು ಅಷ್ಟೇ ಕಷ್ಟ. ರಾಜ್ಯದ ನೆಲ, ಜಲ ಮತ್ತು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಉತ್ತಮ ಧ್ಯೆಯೋದ್ದೇಶಗಳನ್ನ ಅಡಿಪಾಯದಲ್ಲಿ ಮುತ್ತಪ್ಪ ರೈ ಅವರು ಈ ಸಂಘಟನೆಯನ್ನು ಪ್ರಾರಂಭಿಸಿದ್ದರು. ಆ ಮಹತ್ವಾಕಾಂಕ್ಷಿ ಉದ್ದೇಶಗಳನ್ನ ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಬಿ.ಎನ್ ಜಗದೀಶ್ ಉತ್ತಮ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ನಮಗೀಗ ಬೇಕಾಗಿರುವುದು ಬಸವಣ್ಣನವರು, ಶಶಿನಾಳನ ಶರೀಫರು, ಕನಕದಾಸರು, ಕುವೆಂಪು ಮತ್ತು ಕೆಂಪೇಗೌಡರು ಉದೇಶಿಸಿದ್ದಂತಹ ಕರ್ನಾಟಕ ಬೇಕು. ಅಂದರೆ ಎಲ್ಲಾ ಜಾತಿ ಧರ್ಮಗಳನ್ನು ಒಟ್ಟಿಗೆ ಕೊಂಡೊಯ್ಯುವ ಕರ್ನಾಟಕ ಬೇಕು. ಇದು ನಮ್ಮ ಜಯ ಕರ್ನಾಟಕ ಎಲ್ಲಾ ಸಂಘಟನೆಗಳು ಸೇರಿ ಇದನ್ನು ಉಳಿಸಿಕೊಂಡು ಹೋಗಬೇಕು. ದೇಶ ನಮ್ಮದು ನಾಡು ನಮ್ಮದು ಎದೆ ಸೀಳಿದರೂ ಆ ಭಾವನೆಯನ್ನು ಇಟ್ಟುಕೊಂಡಿರಬೇಕು. ಕನ್ನಡ ಪುಸ್ತಕದಲ್ಲಿ ನಮ್ಮ ಚರಿತ್ರೆಯಲ್ಲಿ ಬದಲಾವಣೆ ಆದಂತಹ ಸಂಧರ್ಭದಲ್ಲಿ ಹಲವರು ಧ್ವನಿ ಎತ್ತಿದ್ದೀರಿ. ಆದರೆ ಇತಿಹಾಸವನ್ನು ಯಾರೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಹುಟ್ಟು ಸಾವಿನ ಮಧ್ಯೆ ಏನು ಸಾಧನೆ ಮಾಢುತ್ತೀವೋ ಅದು ಮುಖ್ಯ. ಯಾವ ಅಧಿಕಾರದ ಅಸೆಯೂ ಇಲ್ಲದೇ ದುಡಿಯುತ್ತಿದ್ದಿರಿ. ರಾಜ್ಯದ ಆಸ್ಮಿತೆಯನ್ನು ಉಳಿಸುವಲ್ಲಿ ನಿಮ್ಮಂತಹ ಸಂಘಟನೆಗಳ ಪಾತ್ರ ಹಿರಿದಾಗಿದ್ದು, ನಿಮ್ಮೆಲ್ಲರ ಜೊತೆ ನಾವು ಕೈಜೋಡಿಸುವುದಾಗಿ ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಅವರು ಮಾತನಾಡಿ, ಯುವಕರುಗಳಿಗೆ ಆದರ್ಶಗಳಿಗೆ ಕೊರತೆ ಇಲ್ಲ. ಆದರೆ, ಆದರ್ಶಗಳನ್ನು ತಾವು ಅಳವಡಿಸಿಕೊಂಡು ಅದನ್ನು ಆಚರಣೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಕನ್ನಡ ರಾಜ್ಯದ ಕೊಡುಗೆ ವಿಶ್ವವಿಖ್ಯಾತ. ಸಂಘಟನೆಯ ಮೂಲ ಧ್ಯೆಯೋದ್ದೇಶಗಳನ್ನು ಎತ್ತಿ ಹಿಡಿಯುವಂತಹ ಕೆಲಸ ಹೆಚ್ಚಾಗಿ ಆಗಬೇಕಾಗಿದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ನಾರಾಯಣ ಗೌಡ ಮಾತನಾಡಿ, ಕನ್ನಡ ನಾಡನ್ನು ಕಟ್ಟುವಂತಹ ಕೆಲಸವನ್ನು 15 ವರ್ಷಗಳಲ್ಲಿ ಜಯ ಕರ್ನಾಟಕ ಸಂಘಟನೆ ಮಾಡುತ್ತಿದೆ. ಇವರ ಸೇವೆ ಕನ್ನಡದ ನೆಲ, ಜಲ ಮತ್ತು ಭಾಷೆ ಬೆಳವಣಿಗೆಯಲ್ಲಿ ಇರಲಿ ಎನ್ನುವುದು ಆಶಯವಾಗಿದೆ. ಯಾವುದೇ ಕೆಲಸವನ್ನು ನಿಷ್ಠೇ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತಾರೆ. ಯಾವುದೇ ಸರಕಾರ ಬಂದರೂ ಕನ್ನಡ ಹೋರಾಟಗಾರರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎನ್ನುವ ನೋವು ನಮ್ಮಲ್ಲಿದೆ. ನಿಷ್ಠೂರತೆಯಿಂದ ಕನ್ನಡ ಕಟ್ಟುವ ಕೆಲಸವನ್ನು ಒಗ್ಗಟ್ಟಿನಿಂದ ಮಾಡುವ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದ ಮಹನೀಯರುಗಳಿಗೆ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಿ.ಎನ್ ಜಗದೀಶ್, ರಾಜ್ಯ ಮುಖ್ಯ ಸಲಹೆಗಾರರಾದ ಪ್ರಕಾಶ್ ರೈ, ರಾಜ್ಯ ಕಾರ್ಯಾಧ್ಯಕ್ಷರಾದ ಹೆಚ್. ರಾಮಚಂದ್ರಯ್ಯ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ್, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.