ಬೆಂಗಳೂರು: ಪತಂಜಲಿ ಮಹರ್ಷಿಗಳು ಬರೆದ ‘ಯೋಗ’ಕ್ಕೆ 4 ಸಾವಿರ ವರ್ಷಗಳ ಇತಿಹಾಸವಿದೆ. ಮನಸ್ಸು, ಬುದ್ಧಿ ಮತ್ತು ಆತ್ಮದ ಏಕಾಗ್ರತೆಗೆ ಯೋಗವು ಸಹಕಾರಿ. ಅದು ಸುಖ ಮತ್ತು ನೆಮ್ಮದಿಯನ್ನೂ ನೀಡಬಲ್ಲದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ವೈದ್ಯಕೀಯ ಪ್ರಕೋಷ್ಠದ ವತಿಯಿಂದ ಇಂದು ಬೆಳಿಗ್ಗೆ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಯೋಗಾಸನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಳಿನ್ಕುಮಾರ್ ಕಟೀಲ್ ಅವರು ಮಾತನಾಡಿದರು. ಯೋಗ ಮಾಡಿದವರು ಹೇಗಿರುತ್ತಾರೆ ಎಂಬುದಕ್ಕೆ ಮೋದಿಯವರೇ ಉದಾಹರಣೆ ಎಂದು ನುಡಿದರು.
ಋಷಿಮುನಿಗಳು ತಪಸ್ಸಿನ ಆಧಾರದಲ್ಲಿ ಯೋಗದ ಪರಿಚಯ ಮಾಡಿದರು. ಯೋಗ ಅಧ್ಯಾತ್ಮಕ್ಕೆ ದಾರಿ. ಕಣ್ಮುಚ್ಚಿ ಭಗವಂತನನ್ನು ನೋಡಿದ ದೇಶ ಭಾರತ. ಮನಸ್ಸು, ಬುದ್ಧಿ ಮತ್ತು ಆತ್ಮದ ಏಕಾಗ್ರತೆಗೆ ಇದು ಪೂರಕವಾಗಿ ಕೆಲಸ ಮಾಡುತ್ತದೆ ಎಂದು ವಿವರಿಸಿದರು. ಯೋಗವು ಜಗದ್ಗುರು ಭಾರತ ನಿರ್ಮಾಣಕ್ಕೆ ದಾರಿ ಮಾಡಿ ಕೊಡಲಿ ಎಂದು ಹಾರೈಸಿದರು.
ಇವತ್ತಿನ ದಿನವನ್ನು ಕರ್ನಾಟಕದ ಜನತೆ ಇತಿಹಾಸದಲ್ಲಿ ಬರೆದಿಡಬೇಕಾದ ದಿನ. ಜೂನ್ 21 ಅನ್ನು ಜಗತ್ತಿನ ಯೋಗ ದಿನವನ್ನಾಗಿ ನರೇಂದ್ರ ಮೋದಿಯವರು ಘೋಷಿಸಿದರು. 187 ದೇಶಗಳು ಅದನ್ನು ಅನುಮೋದಿಸಿದ ದಿನವಿದು. ಇದೇ ದಿನ ಕರ್ನಾಟಕದ ಮೈಸೂರಿನಲ್ಲಿ ಪ್ರಧಾನಿಯವರು ಯೋಗ ದಿನದಲ್ಲಿ ಭಾಗವಹಿಸುತ್ತಿರುವುದು ಕರ್ನಾಟಕಕ್ಕೆ ಅತ್ಯಂತ ಮಹತ್ವದ ದಿನ ಎಂದು ಅವರು ವಿವರಿಸಿದರು.
ಕನ್ನಡ ಚಲನಚಿತ್ರ ನಟಿ ಅದಿತಿ ಪ್ರಭುದೇವ್ ಅವರು ಮಾತನಾಡಿ, ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯ ಕಾಪಾಡುವಲ್ಲಿ ಯೋಗ ಪ್ರಮುಖವಾದ ಪಾತ್ರ ವಹಿಸುತ್ತದೆ. ನಮ್ಮನ್ನು ನಾವು ಅರಿತುಕೊಳ್ಳಲು ಯೋಗ ಸಹಾಯ ಮಾಡುತ್ತದೆ ಎಂದರು. ಜೀವನಶೈಲಿ, ಸಮಯ ಸಿಗದೆ ಇರುವ ಕಾರಣ ಪ್ರತಿನಿತ್ಯ ಯೋಗಾಭ್ಯಾಸ ಸಾಧ್ಯವಾಗದಿದ್ದರೂ, ವಾರಕ್ಕೆ ಎರಡು ಮೂರು ದಿನ ಯೋಗಾಭ್ಯಾಸ ಮಾಡಬೇಕೆಂದು ಅವರು ಸಲಹೆ ನೀಡಿದರು.
ಯೋಗಾಭ್ಯಾಸದಿಂದ ಮನೆಗೆ ಮತ್ತು ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿ ಆಗಿ ಹೊರಹೊಮ್ಮಬಹುದು. ಯೋಗಕ್ಕೆ ಒಂದು ಧರ್ಮಕ್ಕೆ ಸೀಮಿತ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಆದರೆ, ಮೋದಿಜಿ ಅವರು ತಿಳಿಸಿದಂತೆ ಪ್ರತಿಯೊಬ್ಬರೂ ಯೋಗಾಭ್ಯಾಸ ಮಾಡಬೇಕೆಂದು ತಿಳಿಸಿದರು.
ವ್ಯಾಸ ಯೋಗ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ|| ಬಿ.ಆರ್.ರಾಮಕೃಷ್ಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ. ಜಯಕರ್ ಶೆಟ್ಟಿ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಬಿ.ನಾರಾಯಣ್, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು.