ಬೆಂಗಳೂರು: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಮಾಜಿ ಸದಸ್ಯ, ಬಿಜೆಪಿ ಕೇರಳ ಪ್ರಭಾರಿ ಥೋಮಸ್ ಚೆರಿಯನ್ ನೀಲಿಯಾರ ಅವರು ಸರ್ವಜ್ಞ ನಗರ ಕ್ಷೇತ್ರದ ಬಿಜೆಪಿ ನಾಮಾಂಕಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ.
ಮೂಲತಃ ಬೆಳ್ತಂಗಡಿ ತಾಲೂಕಿನ ಗಂಡಿಬಾಗಿಲು ಗ್ರಾಮದ ನಿವಾಸಿ ಥೋಮಸ್ ಚೆರಿಯನ್ ನೀಲಿಯಾರ ಮಂಗಳೂರು ವಿಶ್ವವಿದ್ಯಾಲಯದ ಕಾನೂನು ಪದವೀಧರರು. ಕಳೆದ ೨೫ ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಸದಸ್ಯರು ಹಾಗೂ ಕೇರಳದ ಪ್ರಭಾರಿ ಆಗಿದ್ದು, ಬೆಂಗಳೂರು ನಗರ ವಿಶ್ವವಿದ್ಯಾಲಯ ಮಾಜಿ ಸಿಂಡಿಕೇಟ್ ಸದಸ್ಯರೂ ಆಗಿದ್ದಾರೆ.
ಸರ್ವಜ್ಞ ನಗರದ ಹಾಲಿ ಕಾಂಗ್ರೆಸ್ ಶಾಸಕರ ವಿರುದ್ಧ ಬಿಜೆಪಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದಲ್ಲಿ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಇದ್ದು, ಇದರಿಂದ ಬಿಜೆಪಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಉತ್ತಮ ಫ ಲಿತಾಂಶ ದೊರೆಯಲಿದೆ ಎನ್ನಲಾಗಿದೆ. ಸರ್ವಜ್ಞ ನಗರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಸಂಖ್ಯೆ ಅಧಿಕವಾಗಿದೆ. ಈ ಕಾರಣದಿಂದ ಥೋಮಸ್ ಚೆರಿಯನ್ ನೀಲಿಯಾರ ಸ್ಪರ್ಧೆ ಪಕ್ಷಕ್ಕೆ ಬಲ ನೀಡಲಿದೆ ಎಂದು ತಿಳಿದುಬಂದಿದೆ.