ಬೆಂಗಳೂರು: ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ನೀಡಿದ ಉಚಿತ ಭರವಸೆಗಳನ್ನು ಈಡೇರಿಸುವುದು ಈಗ ಸವಾಲಾಗಿ ಪರಿಣಮಿಸಿದೆ. ಜೂನ್ನಿಂದ ರಾಜ್ಯದಲ್ಲಿ ವಿದ್ಯುತ್ ಬಿಲ್ ಮತ್ತು ಬಸ್ ಟಿಕೇಟ್ ದರ ಪಾವತಿಸಬೇಡಿ ಎಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ (ಎಸ್) ಜನರಿಗೆ ಕರೆ ನೀಡಿವೆ. ಆಡಳಿತ ಪಕ್ಷವು ಈ ಬಗ್ಗೆ ಸ್ಪಷ್ಟವಾದ ಘೋಷಣೆ ಮಾಡಲು ವಿಫಲವಾದರೆ, ಪ್ರತಿಭಟನೆ ನಡೆಸುವುದಾಗಿ ಹೇಳಿವೆ.
ಐದು ಭರವಸೆ ಈಡೇರಿಸುವುದು ಹೇಗೆ: ಕಾಂಗ್ರೆಸ್ ಐದು ಭರವಸೆಗಳನ್ನು ನೀಡಿದ್ದು ಅದರಿಂದಾಗಿಯೇ ಜಯಗಳಿಸಿದೆ ಎಂಬುದು ಪ್ರತಿಪಕ್ಷಗಳ ಆರೋಪ. ಅನ್ನ ಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಹತ್ತು ಕಿಲೋಗ್ರಾಂ ಉಚಿತ ಅಕ್ಕಿ, ಗೃಹ ಲಕ್ಷ್ಮಿ ಯೋಜನೆಯಡಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ರೂ 2,000 ಮಾಸಿಕ ನೆರವು, ಯುವ ನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳವರೆಗೆ ಮಾಸಿಕ 3,000 ರೂ. ಮತ್ತು ಸಾರ್ವಜನಿಕ ಸಾರಿಗೆ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮತ್ತು ಗೃಹ ಜ್ಯೋತಿ ಯೋಜನೆಯಡಿ ಎಲ್ಲಾ ಮನೆಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದು ವಾಸ್ತವದಲ್ಲಿ ಸವಾಲಿನ ವಿಷಯವಾಗಿದೆ.
ಚುನಾವಣೆ ವೇಳೆ ಗೃಹ ಲಕ್ಷ್ಮಿ ಯೋಜನೆ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದರು. ರಾಹುಲ್ ಗಾಂಧಿ ಯುವ ನಿಧಿ ಯೋಜನೆಯನ್ನು ಘೋಷಿಸಿದರು.
ಚುನಾವಣೆಯ ನಂತರ, ಕರ್ನಾಟಕ ಸರ್ಕಾರವು ತನ್ನ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಪಕ್ಷದ ಐದು ಭರವಸೆಗಳನ್ನು ಜಾರಿಗೆ ತರಲು ತಾತ್ವಿಕ ಅನುಮೋದನೆ ನೀಡಿದೆ. ಏನೇ ಆಗಲಿ ಈ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು.
ಈ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ವರ್ಷಕ್ಕೆ 50,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಕರ್ನಾಟಕದ ಬಜೆಟ್ ಗಾತ್ರವು 3.1 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಹಣವನ್ನು ಕ್ರೋಢೀಕರಿಸುವುದು ಕಷ್ಟದ ಕೆಲಸವಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದರು. ವಿಧಾನಸಭೆಯಲ್ಲಿ ಏಳು ಬಜೆಟ್ ಮಂಡಿಸಿದ್ದೇನೆ.ಹಣಕಾಸಿನ ಬಗ್ಗೆ ನನಗೆ ಹೆಚ್ಚು ಅರಿವಿದೆ ಎಂದೂ ಹೇಳಿದ್ದರು.
ವಿರೋಧ ಪಕ್ಷಗಳ ಉಚಿತ ಯೋಜನೆ ಕರೆ: ಬಿಜೆಪಿ ಮತ್ತು ಜೆಡಿಎಸ್ ಯೋಜನೆಗಳನ್ನು ಘೋಷಿಸಲು ಕಾಂಗ್ರೆಸ್ ಸರ್ಕಾರಕ್ಕೆ ಒತ್ತಡ ಹೇರುತ್ತಿವೆ. ಅಲ್ಲದೆ ಉಚಿತ ಯೋಜನೆಗಳಿಂದಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಹೇಳುತ್ತಿವೆ. ವಿದ್ಯುತ್ ಬಿಲ್ ಪಾವತಿಸಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಜನರಿಗೆ ಕರೆ ನೀಡಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಕುರಿತು ಸ್ಪಷ್ಟ ಸೂಚನೆ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದೆ. ಉಚಿತ ಪಡಿತರ ಕಾರಣದಿಂದ ಬಿಪಿಎಲ್ ಕಾರ್ಡ್ ಮಾಡಿಸುವವರ ಸಂಖ್ಯೆ ಏರಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಿಪಿಎಲ್ ಕಾರ್ಡ್ಗಾಗಿ ಅರ್ಜಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ ಇಲಾಖೆ ಮೂಲಗಳು ವಿವರಿಸಿವೆ.