ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯ ಅಗಲಿಕೆಗೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಲೀಲಾವತಿ ಅವರೊಟ್ಟಿಗೆ ಕೆಲಸ ಮಾಡಿದ, ಹಲವು ವರ್ಷಗಳ ಕಾಲ ಆತ್ಮೀಯ ಅನುಬಂಧ ಹೊಂದಿದ್ದ ನಿರ್ಮಾಪಕ, ನಟ ದ್ವಾರಕೀಶ್, ಲೀಲಾವತಿ ಅವರ ಬಗ್ಗೆ ಮಾತನಾಡಿ, ಲೀಲಾವತಿಯವರನ್ನು ಕಳೆದುಕೊಂಡ ಚಿತ್ರರಂಗ ನಷ್ಟದಲ್ಲಿದೆ, ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿಯರಲ್ಲಿ ಶ್ರೇಷ್ಠ ನಟಿ ಲೀಲಾವತಿಯವರು. ಅವರು ಇಡೀ ಚಿತ್ರರಂಗಕ್ಕೆ ತಾಯಿಯಾಗಿದ್ದರು ಲೀಲಮ್ಮ ನನ್ನ ತಾಯಿ ಪಾತ್ರ ಮಾಡಬೇಕೆಂಬ ಆಸೆ ನನಗೆ ಇತ್ತು, ‘ಕಳ್ಳ-ಕುಳ್ಳ‘ ಸಿನಿಮಾದಲ್ಲಿ ನನ್ನ ತಾಯಿಯ ಪಾತ್ರವನ್ನು ಅವರಿಂದಲೇ ಮಾಡಿಸಿದೆ. ರಾಜ್ಕುಮಾರ್-ಲೀಲಾವತಿ ಜೋಡಿ ಅತ್ಯಂತ ಜನಪ್ರಿಯ ಜೋಡಿ, ಆ ರೀತಿಯ ಇನ್ನೊಂದು ಜೋಡಿ ಬರಲಿಲ್ಲ, ಲೀಲಾವತಿ ಪ್ರತಿಭೆ ನೋಡಬೇಕೆಂದರೆ ಭಕ್ತ ಕುಂಬಾರ ಸಿನಿಮಾ ನೋಡಬೇಕು ಎಂದು ಅಗಲಿದ ಹಿರಿಯ ನಟಿಯನ್ನು ದ್ವಾರಕೀಶ್ ಕೊಂಡಾಡಿದರು.
ಅವರು ಸಿನಿಮಾ ಸೆಟ್ಗೆ ಬರಬೇಕೆಂದರೆ ಕೇವಲ ನಟಿಯಾಗಿ ಬರುತ್ತಿರಲಿಲ್ಲ. ಸೆಟ್ನಲ್ಲಿದ್ದವರಿಗೆಲ್ಲ ಊಟ ತಯಾರು ಮಾಡಿಕೊಂಡು, ತಿಂಡಿ ಮಾಡಿಕೊಂಡು ಡಬ್ಬಗಳಲ್ಲಿ ಹಾಕಿಕೊಂಡು ಬರುತ್ತಿದ್ದರು. ಅವರಿಗೆ ಅಡುಗೆ ಮಾಡುವುದೆಂದರೆ ಬಹಳ ಇಷ್ಟ. ಜೊತೆಗೆ ಅವರಿಗೆ ತೋಟ ಮಾಡುವುದೆಂದರೆ ಅಚ್ಚು-ಮೆಚ್ಚು. ಮದ್ರಾಸ್ನಲ್ಲಿ ದೊಡ್ಡ ತೋಟ ಮಾಡಿದ್ದರು. ಆ ತೋಟವೆಂದರೆ ಅವರಿಗೆ ಪ್ರಾಣ. ದೊಡ್ಡದಾಗಿ ತೋಟ ಮಾಡಿದ್ದರು. ಹಲವು ಕಲಾವಿದರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ತೋಟ ತೋರಿಸಿದ್ದರು. ನಾವೂ ಸಹ ಅಲ್ಲಿಗೆ ಹೋಗಿ ತೋಟ ನೋಡಿ ಬಂದಿದ್ದೆವು ಎಂದು ನೆನಪು ಮಾಡಿಕೊಂಡಿದ್ದಾರೆ.
ಇನ್ನು ಉಮಾಶ್ರೀ ಅವರು ಮಾತನಾಡಿ, ಲೀಲಾವತಿ ಅವರು ಕೇವಲ ನಟಿಯಲ್ಲ, ಅವರು ದಂತಕತೆ. ನಟಿಯಾಗಿ ಮಾತ್ರವೇ ಅಲ್ಲದೆ, ತಮ್ಮ ಮಾನವೀಯ ಗುಣಗಳಿಂದ, ಸಾಮಾಜಿಕ ದೃಷ್ಟಿಕೋನದಿಂದಲೂ ಗುರುತಿಸಿಕೊಂಡವರು. ಒಬ್ಬ ನಟಿ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವರು. ಹಲವಾರು ಮಂದಿಗೆ ಮಾದರಿಯಾಗಿ ಬದುಕಿದವರು ಲೀಲಾವತಿ ಎಂದಿದ್ದಾರೆ. ನಟಿಯಾಗಿ ತಾನು ದುಡಿದಿದ್ದನ್ನು ಸಮಾಜಕ್ಕೆ ಅರ್ಪಿಸಿದವರು ಲೀಲಾವತಿ. ದುಡಿದಿದ್ದೆಲ್ಲವನ್ನೂ ಮಗನಿಗಾಗಿ ನೀಡದೆ ಸಮಾಜಕ್ಕೆ ಪಾಲು ನೀಡಿದ ಮಹಾನ್ ಮಹಿಳೆ ಲೀಲಾವತಿ. ನಟಿಯಾಗಿ ಮೆರೆದರೂ ರೈತ ಮಹಿಳೆಯಾಗಿ ಜೀವನ ನಡೆಸಿದರು. ತಮ್ಮ ತೋಟದಲ್ಲಿ ತಾನೇ ಗುದ್ದಲಿ, ಸಲಿಕೆ ಹಿಡಿದು ಕೆಲಸ ಮಾಡುತ್ತಿದ್ದರು. ಅವರನ್ನು ಹತ್ತಿರದಿಂದ ನೋಡಿದವರು ಮಾತ್ರವೇ ಇದನ್ನೆಲ್ಲ ಬಲ್ಲರು ಎಂದಿದ್ದಾರೆ.
ಇನ್ನು ಮುಖ್ಯವಾದ ವಿಚಾರಕ್ಕೆ ಬರುವುದಾದರೇ, ತಾಯಿ ಕರುಳಿನ ಗುಣದಿಂದಾಗಿ ಎಲ್ಲರ ಪಾಲಿಗೂ ಅವರು ಅಮ್ಮನಾಗಿದ್ದರು. ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಕೂಡ ತಾಯಿಯ ಪ್ರೀತಿಯನ್ನು ಅವರು ತೋರುತ್ತಿದ್ದರು. ಮೂಕ ಪ್ರಾಣಿಗಳ ಬಗ್ಗೆ ಲೀಲಾವತಿ ಅವರಿಗೆ ಇದ್ದ ಕಾಳಜಿ ಅಪಾರ. ಹಾಗಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಪಶು ಆಸ್ಪತ್ರೆಯನ್ನು ಕಟ್ಟಿಸಿದರು. ಅದಕ್ಕಾಗಿ ಅವರು ಖರ್ಚು ಮಾಡಿದ್ದು ಬರೋಬ್ಬರಿ 45 ಲಕ್ಷ ರೂಪಾಯಿ. ಕೆಲವೇ ದಿನಗಳ ಹಿಂದೆ ಈ ಆಸ್ಪತ್ರೆ ಉದ್ಘಾಟನೆ ಆಯಿತು. ಆ ಸತ್ಕಾರ್ಯದಿಂದ ಸಮಾಧಾನಗೊಂಡ ಬಳಿಕವೇ ಲೀಲಾವತಿ ಅವರು ಇಹಲೋಕ ತ್ಯಜಿಸಿದರು. ತಾವು ಅಂದುಕೊಂಡಿದ್ದ ಕೆಲಸವನ್ನು ಮಾಡಿ ಮುಗಿಸಿಯೇ ಅವರು ಕೊನೆಯುಸಿರು ಎಳೆದರು.
ಇನ್ನು ಜನರ ಬಗ್ಗೆಯೂ ಅಷ್ಟೇ ಕಾಳಜಿ ಹೊಂದಿದ್ದ ಲೀಲಾವತಿ ಅವರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸಿದರು. ಹಳ್ಳಿಯ ಜನರಿಗೆ ಇದರಿಂದ ಅನುಕೂಲ ಆಗುತ್ತಿದೆ. ಬಡ ಕಲಾವಿದರಿಗೆ ಜೀವನಕ್ಕೆ ನೆರವಾಗುವ ಉದ್ದೇಶದಿಂದ ಪ್ರತಿ ತಿಂಗಳು ಮಾಶಾಸನ ನೀಡುವ ವ್ಯವಸ್ಥೆ ಮಾಡಿದ್ದರು. ಅನೇಕ ಕಲಾವಿದರ ಜೀವನ ಇದರಿಂದ ನಡೆಯುತ್ತಿದೆ. ಸಿನಿಮಾ ಮತ್ತು ಕೃಷಿಯಿಂದ ತಾವು ಸಂಪಾದಿಸಿದ ಹಣದಲ್ಲಿ ಬಹುಪಾಲು ಮೊತ್ತವನ್ನು ಅವರು ಈ ರೀತಿಯ ಸಮಾಜಮುಖಿ ಕೆಲಸಕ್ಕೆ ನೀಡಿದ್ದಾರೆ.