ಬೆಂಗಳೂರು: ರಸ್ತೆ ಗುಂಡಿ ತುಂಬಲು ಪ್ರತಿವರ್ಷ ರಾಜ್ಯ ಸರ್ಕಾರ ಕೋಟ್ಯಾಂತರ ರೂ. ಅನುದಾನ ಖರ್ಚು ಮಾಡುತ್ತದೆ. ಆದರೆ ಬೆಂಗಳೂರಿನಲ್ಲಿ ಈಗಲೂ ರಸ್ತೆಗುಂಡಿಗಳ ಸಮಸ್ಯೆ ಜೀವಂತವಾಗಿದ್ದು, ನೂರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಗುಂಡಿ ಮುಚ್ಚುವಂತೆ ಸಾರ್ವಜನಿಕರು ಎಷ್ಟೇ ಮನವಿ ಸಿಲ್ಲಿಸಿದ್ದರೂ ಸರ್ಕಾರ ಉದಾಸೀನತೆ ಪ್ರದರ್ಶಿಸುತ್ತಿದೆ. ಸರ್ಕಾರದ ಈ ನಿಲುವಿನಿಂದ ಬೇಸತ್ತ ‘ಸಿಟಿಜನ್ಸ್ ಗ್ರೂಪ್, ಈಸ್ಟ್ ಬೆಂಗಳೂರು’ ಸಂಘಟನೆ ಸದಸ್ಯರು ತಾವೇ ಗುಂಡಿ ಮುಚ್ಚಿದ್ದಾರೆ. ಅಲ್ಲದೇ “ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ”ವನ್ನೂ ಆರಂಭಿಸಿದ್ದಾರೆ.
ಹಾಲನಾಯಕಹಳ್ಳಿಯ ಮುನೇಶ್ವರ ಲೇಔಟ್ ಮತ್ತು ಚೂಡಸಂದ್ರದ 6 ಕಿಮೀ ಉದ್ದದ ರಸ್ತೆಯಲ್ಲಿ ಗುಂಡಿ ಮುಚ್ಚಲು ಸಿಟಿಜನ್ಸ್ ಗ್ರೂಪ್ ಸದಸ್ಯರು ಸ್ವಂತ ಖರ್ಚು ಭರಿಸಿದ್ದಾರೆ. ಈ ಕುರಿತು ಮಾತನಾಡಿರುವ ಸಂಘಟನೆಯ ಸ್ಥಾಪಕ, ಟೆಕ್ಕಿ ಆರಿಫ್ ಮುದ್ಗಲ್ (32) ಮಾತನಾಡಿ ನಾನು ಈ ಕೆಲಸಕ್ಕಾಗಿ 2.7 ಲಕ್ಷ ರೂ. ಸಾಲ ಮಾಡಿದ್ದೇನೆ. ಕೆಲವು ದಿನಗಳ ಹಿಂದೆ ನನ್ನ ಅಪಾರ್ಟ್ಮೆಂಟ್ ಬಳಿ ವಾಸಿಸುತ್ತಿದ್ದ ಮಹಿಳೆಯೊಬ್ಬರು ಅವರು ಪ್ರಯಾಣಿಸುತ್ತಿದ್ದ ಆಟೋ ಗುಂಡಿಗೆ ಸಿಕ್ಕಿ ಪಲ್ಟಿಯಾಗಿ ಗಾಯಗೊಂಡರು. ನಂತರ ಆಗಸ್ಟ್ 14 ರ ರಾತ್ರಿ ಅದೇ ಗುಂಡಿಯನ್ನು ತಪ್ಪಿಸಲು ಹೋಗಿ ಇ-ಕಾಮರ್ಸ್ ಸಂಸ್ಥೆಯ ಡೆಲಿವರಿ ಏಜೆಂಟ್ ಕಾರಿಗೆ ಡಿಕ್ಕಿ ಹೊಡೆದು ಕಾಲು ಮುರಿದುಕೊಂಡರು. ಇದರಿಂದ ಮನಸ್ಸಿಗೆ ಬೇಜಾರಾಯಿತು. ಇದೇ ಕಾರಣದಿಂದ ಗುಂಡಿ ಮುಚ್ಚಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ನಾವು ಸಿಟಿಜನ್ಸ್ ಗ್ರೂಪ್ ಈಸ್ಟ್ ಬೆಂಗಳೂರು ಎಂಬ ಸಂಘಟನೆಯನ್ನು ಐದು ವರ್ಷಗಳ ಹಿಂದೆ ಆರಂಭಿಸಿದ್ದೆವು . ಸಂಘಟನೆ ಸದಸ್ಯರು ರಸ್ತೆಗಳ ಗುಂಡಿ ಮುಚ್ಚಲು ಹಣ ನೆರವು ನೀಡುತ್ತಿದ್ದಾರೆ. ಆದರೆ ನನ್ನ ಬಳಿ ಹಣ ಇಲ್ಲ ಇದೇ ಕಾರಣಕ್ಕೆ 2.7 ಲಕ್ಷ ರೂ. ಸಾಲ ಮಾಡಿದ್ದೇನೆ ಎಂದು ಆರಿಫ್ ತಿಳಿಸಿದ್ದಾರೆ.
ಇತರ ರಾಜ್ಯಗಳವರು ಎಂದು ಅಸಡ್ಡೆ ಅದಕ್ಕಾಗಿ ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ: ರಸ್ತೆ ಗುಂಡಿ ಮುಚ್ಚುಂತೆ ರಾಜಕಾರಣಿಗಳ ಬಳಿ ಹೋದರೆ ಅವರು ಅಸಡ್ಡೆ ತೋರುತ್ತಾರೆ. ಈ ಪ್ರದೇಶಗಳ ನಿವಾಸಿಗಳು ಇತರ ರಾಜ್ಯಗಳು ಅಥವಾ ಸ್ಥಳಗಳಿಂದ ಬಂದವರು ಎಂದು ಅವರು ಭಾವಿಸುತ್ತಾರೆ. ಹೀಗಾಗಿ ನಾವು ಇನ್ಮುಂದೆ “ಆಸ್ತಿ ತೆರಿಗೆ ಬಹಿಷ್ಕಾರ ಅಭಿಯಾನ” ಆರಂಭಿಸಿದ್ದೇವೆ ಎಂದು ಸಂಘಟನೆಯ ಸದಸ್ಯ ಕುಮಾರ್ ಹೇಳಿದರು.