ಬೆಂಗಳೂರು: ಕಲ್ಲು ತೂರಾಟ ನಡೆಸಿ ಎಂಟು ಮಂದಿ ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ಮೀನುಗಾರರ ವಿರುದ್ಧ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೀನುಗಾರರು ಪೊಲೀಸರಿಗೆ ದೂರು ನೀಡಿದ್ದಾರೆ.
ಫೆ.8ರಂದು ತಮಿಳುನಾಡಿನ ಕನ್ಯಾಕುಮಾರಿ ಬಳಿ ಮೀನುಗಾರರ ದೋಣಿಗಳು ಮೀನುಗಾರಿಕೆಗೆಂದು ಸಮುದ್ರಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದರು.ಕರ್ನಾಟಕದ ಬೋಟ್ಗಳನ್ನು ತಮಿಳುನಾಡು ಮೀನುಗಾರರು ಸುತ್ತುವರಿದು ದಾಳಿ ನಡೆಸಿದ್ದಾರೆ.
ಕರ್ನಾಟಕದ ಮೀನುಗಾರರು ಘಟನೆಯ ವಿಡಿಯೋಗಳನ್ನು ತೆಗೆದು ಪೊಲೀಸರಿಗೆ ಸಲ್ಲಿಸಿದ್ದರು. ಈ ಬಗ್ಗೆ ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಅವರನ್ನು ಭೇಟಿ ಮಾಡಿ ರಕ್ಷಣೆ ಕೋರಿ ಮನವಿ ಸಲ್ಲಿಸಿದ್ದರು.
ತಮಿಳುನಾಡು ಮೀನುಗಾರರು ಕರ್ನಾಟಕದ ಮೀನುಗಾರರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹರೀಶ್ ಕುಮಾರ್ ಹೇಳಿದ್ದಾರೆ.
“ಕರ್ನಾಟಕ ಮೀನುಗಾರರು ಮಿತಿ ಮೀರಿ ಮೀನುಗಾರಿಕೆ ನಡೆಸುವ ಮೂಲಕ ಉಲ್ಲಂಘನೆಯಾಗಿದ್ದರೆ, ಅವರು ತಮ್ಮ ಸಹವರ್ತಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಬಹುದಿತ್ತು. ಮೀನುಗಾರಿಕಾ ದೋಣಿಗಳು ಗಡಿ ದಾಟಿದೆಯೇ ಎಂದು ಪರಿಶೀಲಿಸಬೇಕು.
12 ನಾಟಿಕಲ್ ಮೈಲುಗಳಿಂದ 200 ನಾಟಿಕಲ್ ಮೈಲುಗಳವರೆಗೆ ಆಳ ಮೀನುಗಾರಿಕೆ ನಡೆಸಲು ಮೀನುಗಾರರಿಗೆ ಅನುಮತಿ ನೀಡಲಾಗಿದೆ,’’ ಎಂದು ವಿವರಿಸಿದರು.
ದಾಳಿಗೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಮೀನುಗಾರರ ಒಕ್ಕೂಟ ಸಭೆ ನಡೆಸಿತ್ತು. ಇದು ಅಂತಾರಾಜ್ಯ ಸಮಸ್ಯೆಯಾಗಿರುವುದರಿಂದ ಮೀನುಗಾರಿಕೆ ನಿರ್ದೇಶನಾಲಯದ ಗಮನಕ್ಕೆ ತರಲಾಗಿದೆ. ಈ ಸಂಬಂಧ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.