ಬೆಂಗಳೂರು: ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಉದಯ ಪ್ರಕಾಶನದ ವತಿಯಿಂದ ‘ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ’ ಮತ್ತು ಪಿ. ನಾಗರಾಜ ಅವರು ಸಂಪಾದಿಸಿರುವ ‘ಜ್ಞಾನಸೂತ್ರ’ (ಪ್ರೊ. ಮಲ್ಲೇಪುರಂ ಜೊತೆ ಸಂ-ದರ್ಶನ) ಗ್ರಂಥ ಲೋಕಾರ್ಪಣೆ ಸಮಾರಂಭವು ಸೋಮವಾರದಂದು ಬೆಂಗಳೂರಿನ ನಯನಸಭಾಂಗಣದಲ್ಲಿ ನಡೆಯಿತು.
ಕುಪ್ಪಂ ದ್ರಾವಿಡ ವಿಶ್ವವಿದ್ಯಾಲಯ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಕೆ. ಶಾರದಾ ಅವರಿಗೆ 2023ನೇ ಸಾಲಿನ ‘ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ’ಯನ್ನು ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಹಲ್ಯಾ ಶರ್ಮಾ ಪ್ರದಾನ ಮಾಡಿದರು.
ನಾಡೋಜ ಡಾ.ಮನು ಬಳಿಗಾರ ಅವರು ಲೇಖಕ ಪಿ. ನಾಗರಾಜ ಅವರು ಸಂಪಾದಿಸಿದ ಜ್ಞಾನಸೂತ್ರ (ಪ್ರೊ. ಮಲ್ಲೇಪುರಂ ಜೊತೆ ಸಂ-ದರ್ಶನ) ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು.
ನಂತರದಲ್ಲಿ ಮಾತನಾಡಿದ ಅವರು, “ಯಾವುದೇ ಭಾಷೆಯನ್ನು ನಾವು ಕಡ್ಡಾಯವೆಂದು ಮಾಡಿದಾಗ ಸುಪ್ರಿಂ ಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡುತ್ತದೆ. ಸಂವಿಧಾನ ಬದ್ಧವಾಗಿ ಎಲ್ಲಾ ಪ್ರಾಂತೀಯ ಭಾಷೆಗಳಿಗೆ ಕಡ್ದಾಯವಾಗಿ ಸ್ಥಾನಮಾನ ಸಿಗಬೇಕು. ಇನ್ನು ‘ಶಿವತತ್ವ ರತ್ನಾಕರ ಕೃತಿಯು ದೊಡ್ಡ ದೊಡ್ಡ ವಿದ್ವಾಂಸರು ಮಾತ್ರ ಓದುವುದಲ್ಲದೇ ಅದು ಎಲ್ಲರಿಗೂ ಉಪಕಾರಿಯಾಗುತ್ತದೆ. ಅದನ್ನು ಸಂಸ್ಕೃತದ ಎರಡನೇ ವಿಶ್ವಕೋಶ ಎನ್ನಬಹುದು. ಎಲ್ಲಿ ಜನಜೀವನಕ್ಕೆ ಉಪಯೋಗವಾಗುವ ಹಲವಾರು ಪ್ರಸ್ತಾಪಗಳನ್ನು ಕಾಣಬಹುದು” ಎಂದರು.
ಕಲಬುರಗಿ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್.ಟಿ. ಪೋತೆ ಅಭಿನಂದನ ನುಡಿಗಳನ್ನಾಡಿ, “ಮಲ್ಲೇಪುರಂ ಅವರ ಕಾರ್ಯದಕ್ಷತೆ, ವಿಶ್ವಾಸ, ಪ್ರೀತಿ ಹೀಗೆ ಅವರ ಬಹುಶಿಸ್ತೀಯ ಕಾಳಜಿಯನ್ನು ನೋಡಿದಾಗ ಮಲ್ಲೇಪುರಂ ಅವರ ಕೆಲಸವನ್ನು, ಅವರು ಮಾಡಿದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಸಲುವಾಗಿ ಸಂಸ್ಥೆಯನ್ನು ಹುಟ್ಟುಹಾಕಿ ನೆರವನ್ನು ಕೊಡುವ ಯೋಜನೆ ಬಂತು. ಹಾಗೆ ಈ ಪ್ರತಿಷ್ಠಾನವು ಶುರುವಾಯಿತು. ಪ್ರತಿಷ್ಠಾನ ಶುರುವಾದಗಿನಿಂದ ಇಂದಿನವರೆಗೂ ಹಲವಾರು ವಿದ್ವಾಂಸರಿಗೆ ಅವರ ಸಾಹಿತ್ಯ ಸೇವೆಯನ್ನು ಪರಿಗಣಿಸಿ ನಾವು ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದೇವೆ” ಎಂದರು.
ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ಕೆ. ಶಾರದಾ ಮಾತನಾಡಿ, “ಮಲ್ಲೇಪುರಂ ಪ್ರತಿಷ್ಠಾನವು ಪ್ರಶಸ್ತಿಯನ್ನು ಪ್ರದಾನ ಮಾಡುವ ಮೂಲಕ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಮಲ್ಲೇಪುರಂ ಅವರು ನನಗೆ ಯಾವಾಗಲೂ ವೈರುಧ್ಯಗಳ ರೂಪಕವಾಗಿ ಕಾಣುತ್ತಾರೆ. ಅವರು ಧರಿಸುವ ಉಡುಗೆಯೇ ಭಿನ್ನವಾಗಿದ್ದಾರೆ, ಅವರ ವ್ಯಕ್ತಿತ್ವವೂ ಅದಕ್ಕಿಂತಲೂ ಭಿನ್ನವಾಗಿ ತೋರುತ್ತದೆ” ಎಂದರು.
ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಹಲ್ಯಾ ಶರ್ಮಾ ಮಾತನಾಡಿ, “ಈ ಅಭಿನಂದನ ಕಾರ್ಯಕ್ರಮವು ಗುರು-ಶಿಷ್ಯರ ಸಂಬಂಧದಕ್ಕೆ ಒಂದು ಉತ್ತಮ ನಿದರ್ಶನವಾಗಿದೆ” ಎಂದರು.
ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಪಿ. ನಾಗರಾಜು , ” ಗುರುಗಳಿಗೆ ಶಿಷ್ಯನ ಕಿರು ಕಾಣಿಕೆ ಈ ಕೃತಿಯಾಗಿದೆ. ಮಲ್ಲೇಪುರಂ ಅವರ ಎಲ್ಲ ಸಂದರ್ಶನಗಳ ಮಾಹಿತಿಯನ್ನು ನೀಡಿದ ಅವರ ಶಿಷ್ಯ ವೃಂದ ಹಾಗೂ ಅಭಿಮಾನಿ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು. ಕೃತಿಯನ್ನು ಸಂಪಾದಿಸಲು ಸಹಕರಿಸಿದ ಎಲ್ಲರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.
ಕರ್ನಾಟಕ ಗಾಂಧಿಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ, “ ಮಲ್ಲೇಪುರಂ ಅವರು ಒಬ್ಬ ಆಧ್ಯಾತ್ಮ ಜೀವಿ. ಅವರು ಸಂಪಾದಿಸಿರುವ ಶಿಷ್ಯರು ಮತ್ತು ಅಭಿಮಾನಿ ಬಳಗ ಅಪಾರವಾದದ್ದು” ಎಂದು ಅಧ್ಯಕ್ಷೀಯ ನುಡಿಗಳಾನಾಡಿದರು.
ಕಾರ್ಯಕ್ರಮದಲ್ಲಿ ಮದನ್ ಪಟೇಲ್, ಜಿ.ಕೃಷ್ಣ, ಎಂ.ಎನ್ ಸುಂದರ್ ರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.