ಬೆಂಗಳೂರು: ರಾಮಸಂದ್ರದ ಮನೆಯೊಂದರ ಸಮೀಪ ಸಂಭವಿಸಿರೋ ಭಯಾನಕ ಸ್ಫೋಟ ಮೂವರನ್ನ ಬಲಿ ಪಡೆದಿದೆ. ಹೊತ್ತಿ ಉರಿದ ಬೆಂಕಿಗೆ ಪರ್ಫ್ಯೂಮ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಾ ಇದ್ದ ಮೂವರು ಸಜೀವವಾಗಿ ದಹನವಾಗಿದ್ದಾರೆ. ಬೆಂಕಿ ಬಿದ್ದ ತಕ್ಷಣ ಅಗ್ನಿಯ ಜ್ವಾಲೆ ಇಡೀ ಅಂಗಡಿಯನ್ನು ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ ಒಳಗಿದ್ದ ಸಿಬ್ಬಂದಿಗಳು ಹೊರಗೆ ಬರಲು ಆಗದೇ ಮೃತಪಟ್ಟಿದ್ದಾರೆ.
ಮನೆ ಪರಿಶೀಲಿಸಿದ ಬಳಿಕ ಮಾಹಿತಿ ನೀಡಿದ ಎಸ್ಪಿ ಕಾರ್ತಿಕ್ ರೆಡ್ಡಿ, ಇವತ್ತು ಸಂಜೆ ಐದು ಗಂಟೆಗೆ ರಾಮಸಂದ್ರದಲ್ಲಿ ಬೆಂಕಿ ಅವಘಡವಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮೂವರಲ್ಲಿ ಸಲೀಂ ಅನ್ನೋರ ಗುರುತು ಪತ್ತೆಯಾಗಿದೆ. ಉಳಿದ ಇಬ್ಬರ ಗುರುತು ಪತ್ತೆಯಾಗಿಲ್ಲ. ಐದು ಮಂದಿ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿದ್ದಾರೆ. ಗಾಯಾಳುಗಳಲ್ಲಿ ಒಬ್ಬ 15 ವರ್ಷದ ಅಪ್ರಾಪ್ತ ಹುಡುಗನಿದ್ದಾನೆ. ಮೇಲ್ನೋಟಕ್ಕೆ ಇಲ್ಲಿ ಪರ್ಫ್ಯೂಮ್ ಫಿಲ್ಲಿಂಗ್ ಮಾಡ್ತಿರೋದು ಕಂಡುಬಂದಿದೆ. FSLನವರು ವರದಿ ಕೊಟ್ಟ ಬಳಿಕ ಘಟನೆಗೆ ಕಾರಣ ಏನು ಅಂತ ಗೊತ್ತಾಗಬೇಕಿದೆ. ಗೋಡೌನ್ನ ಚಿಕ್ಕ ಕೋಣೆಯಲ್ಲಿ ಮೂವರ ಶವ ಪತ್ತೆಯಾಗಿದ್ದು, ತನಿಖೆ ನಡೆಸಲಾಗ್ತಿದೆ ಎಂದಿದ್ದಾರೆ.