ಬೆಂಗಳೂರು: ನಮ್ಮನ್ನ ಆಯ್ಕೆ ಮಾಡಿರುವ ಜನರಲ್ಲಿ ಹೆಚ್ಚಿನ ಅಂಶ ಹಿಂದೂಗಳೇ ಇದ್ದಾರೆ. ನಾವು ಹೇಗೆ ಹಿಂದೂ ವಿರೋಧಿ ಆಗುತ್ತೇವೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಕೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಹೇಳುವುದಕ್ಕೂ ಒಂದು ಮಿತಿ ಇರಬೇಕು. ಇಂತಹ ವಿಷಯಗಳಲ್ಲಿ ನಾವು ನ್ಯಾಯವಾಗಿ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ದತ್ತಪೀಠ ಹೋರಾಟಗಾರರ ವಿರುದ್ಧದ ಪ್ರಕರಣವನ್ನು ರೀ ಓಪನ್ ಮಾಡಿ ಕ್ರಮಕ್ಕೆ ಮುಂದಾದ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ನಾನು ಕೇಸ್ ರೀ ಓಪನ್ ಮಾಡಿಲ್ಲ. ಪೊಲೀಸ್ ಠಾಣೆಯಲ್ಲಿ ಇರುವ ಪ್ರಕರಣಗಳ ವಿರುದ್ಧ ಅಧಿಕಾರಿ ಕ್ರಮ ತೆಗೆದುಕೊಳ್ಳಲು ಹೋದರೆ ರೀ ಓಪನ್ ಮಾಡಿದ್ದೀರಾ ಅಂತ ಕೇಳಿದರೆ ಹೇಗೆ? ಕೋರ್ಟ್ ಸೂಚನೆ ಕೊಟ್ಟಿದ್ದರೆ ನಾವು ಕೇಳಬಾರದಾ? ಬಿಜೆಪಿಯವರು ಕೋರ್ಟ್, ಕಾನೂನಿಗೂ ಬೆಲೆ ಕೊಡುವುದಿಲ್ಲ ಎಂದು ಹೇಳಿದರು.