ಬೆಂಗಳೂರು: ನಕಲಿ ವೋಟರ್ ಐಡಿ, ಆಧಾರ್ ಕಾರ್ಡ್, ಡಿಎಲ್ ತಯಾರು ಮಾಡುತ್ತಿದ್ದ ಆರೋಪದಡಿ ಸಚಿವ ಬೈರತಿ ಸುರೇಶ್ ಆಪ್ತನಿಗೆ ಸಿಸಿಬಿ ನೋಟಿಸ್ ನೀಡಿದೆ. ಮೌನೇಶ್ ಎಂಬಾತನಿಗೆ ಸಿಸಿಬಿ ಪೊಲೀಸರ ನೋಟಿಸ್ ನೀಡಿದ್ದಾರೆ.
ಸಚಿವ ಭೈರತಿ ಸುರೇಶ್ ಆಪ್ತವಲಯದಲ್ಲಿ ಮೌನೇಶ್ ಗುರುತಿಸಿಕೊಂಡಿದ್ದನು. ಖಚಿತ ಮಾಹಿತಿ ಆಧರಿಸಿ ಹೆಬ್ಬಾಳದ ಕನಕನಗರದ ಕಚೇರಿ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಮೌನೇಶ್, ಭಗತ್ ಮತ್ತು ರಾಘವೇಂದ್ರ ಎಂಬ ಮೂವರನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಆರೋಪಿಗಳು ಹೆಬ್ಬಾಳದಲ್ಲಿ ಹಣ ನೀಡಿದರೆ ನಕಲಿ ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದರು ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಜನರು ಅವರು ಕೇಳಿದಷ್ಟು ಹಣ ನೀಡಿದ್ರೆ ಯಾವುದೇ ಕ್ಷೇತ್ರದ ದಾಖಲೆಗಳನ್ನು ಮಾಡಿಕೊಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ಹೆಬ್ಬಾಳದ ಕನಕನಗರದಲ್ಲಿರುವ ಎಂಎಸ್ಎಲ್ ಟೆಕ್ನೊ ಸಲ್ಯೂಷನ್ ಕಂಪನಿ ಮೇಲೆ ದಾಳಿ ನಡೆಸಿದ್ದರು. ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.