ಬೆಂಗಳೂರು, ಜು.25: ಕೊಡಗು ಜಿಲ್ಲೆಯಲ್ಲಿ 2018 ರ ನಂತರ ಸಂಬವಿಸುತ್ತಿರುವ ಭೂ ಕುಸಿತ ಮತ್ತು ಭೂಕಂಪ ಆಗುತ್ತಿರುವ ಕುರಿತು ನಿಖರ ಕಾರಣವನ್ನು ಪತ್ತೆ ಹಚ್ಚಿ ಮುಂದಾಗಬಹುದಾದ ಸಾವು ನೋವುಗಳನ್ನು ಕನಿಷ್ಟಗೊಳಿಸುವ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಬೆಂಗಳೂರಿನ ರಾಜಾಜಿನಗರದ ಸಾಮಾಜಿಕ ಕಾರ್ಯಕರ್ತೆ ಗೀತಾ ಮಿಶ್ರಾ ಅವರು ಸಲ್ಲಿಸಿರುವ ಅರ್ಜಿಯು ಕಳೆದ ಶುಕ್ರವಾರ ಹಂಗಾಮಿ ಮುಖ್ಯ ನ್ಯಾಯಾಧೀಶ ಅಲೋಕ್ ಅರಾಧೆ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ವಿಚಾರಣೆ ನಡೆಸಿದ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಮೂರು ವಾರಗಳಲ್ಲಿ ಉತ್ತರಿಸುವಂತೆ ಸೂಚನೆ
ನೀಡಿತು. ಅಲ್ಲದೆ, ಕೊಡಗಿನ ಸಮಸ್ಯೆ ಬಗೆಹರಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಸರಕಾರ ವಿವರ ನೀಡಬೇಕು ಎಂದು ನಿರ್ದೇಶನ ನೀಡಿ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ಮುಂದೂಡಿದೆ.
ಅರ್ಜಿದಾರರ ಪರ ವಕೀಲರಾದ ಜಿ ಆರ್ ಮೋಹನ್ ಅವರು ಅರ್ಜಿಯಲ್ಲಿ 2018ರಲ್ಲಿ ಕೊಡಗಿನಲ್ಲಿ ಭಾರಿ ಮಳೆಯಿಂದಾಗಿ ಪ್ರಾಣ ಮತ್ತು ಅಪಾರ ಆಸ್ತಿ – ಪಾಸ್ತಿ ನಷ್ಟವಾಯಿತು. ಅದಾದ ನಂತರ ಪ್ರತಿ ವರ್ಷವೂ ಜಿಲ್ಲೆಯ ಕೆಲವೆಡೆ ಭೂ ಕುಸಿತ ಮತ್ತು ಭೂಕಂಪಗಳ ಸಂಭವಿಸುತಿದ್ದು ಜೀವ ಹಾಗೂ ಆಸ್ತಿ – ಪಾಸ್ತಿ ಹಾನಿ ಆಗುತ್ತಿದೆ. ಈ ಭೂಕುಸಿತದ ಕಾರಣವನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ವಿಶೇಷ ತಂಡ ರಚಿಸಬೇಕು ಮತ್ತು ಮುಂದಿನ ಸಂಭವನೀಯ ಅನಾಹುತವನ್ನು ತಪ್ಪಿಸಲು ಮುಂದಾಗುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಇದಕ್ಕೆ ಜಿಲ್ಲಾಡಳಿತದ ನಿರ್ಲಕ್ಷ್ಯವೇ
ಕಾರಣ, ಕೊಡಗು ಜಿಲ್ಲೆಯಲ್ಲಿ ಹಾನಿ ತಡೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ 2020ರಲ್ಲಿಯೇ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಏನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಅಲ್ಲದೆ ಅರ್ಜಿಯಲ್ಲಿ ಜಿಲ್ಲಾಧಿಕಾರಿ , ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಭೂ ವಿಜ್ಞಾನ ಅಧಿಕಾರಿಗಳನ್ನು ಹೊಣೆ ಮಾಡಲಾಗಿದೆ.
ಸಾರ್ವಜನಿಕ ರಿಟ್ ಅರ್ಜಿ ಕುರಿತು ಈ ವರದಿಗಾರನೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಗೀತಾ ಮಿಶ್ರಾ ಅವರು ಭೂಕಂಪ ಮತ್ತು ಭೂ ಕುಸಿತಕ್ಕೆ ಮರಳು ಗಣಿಗಾರಿಕೆ ಮತ್ತು ಅವೈಜ್ಞಾನಿಕ ಹೋಂ ಸ್ಟೇ , ರೆಸಾರ್ಟ್ ಕಟ್ಟಡಗಳ ನಿರ್ಮಾಣ , ಗುಡ್ಡ ಗಳಲ್ಲಿ ಮಣ್ಣಿನ ಅಗೆತವೇ ಮುಖ್ಯ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಹೇಳಿದರು. ಅಲ್ಲದೆ ಈ ಕುರಿತು ಅಧ್ಯಯನ ನಡೆಸಲು 2020ರ ಮಾರ್ಚ್ ನಲ್ಲಿಯೇ ಅಂದಿನ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಏನೂ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಕೈಗೊಳ್ಳದ ಹಿನ್ನೆಲೆಯಲ್ಲಿ
2020 ರ ಆಗಸ್ಟ್ ನಲ್ಲಿಯೇ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಹೇಳಿದರು. ಹೈ ಕೋರ್ಟಿನಲ್ಲಿ ಕೋವಿಡ್ ಕುರಿತ ವ್ಯಾಜ್ಯಗಳ ವಿಚಾರಣೆಗೆ ಆದ್ಯತೆ ನೀಡಿದ್ದರಿಂದ ವಿಚಾರಣೆಗೆ ಬರಲು 23 ತಿಂಗಳು ಆಯಿತು ಎಂದರು.
ಸರಕಾರ ವೈಜ್ಞಾನಿಕ ರೀತಿಯಲ್ಲಿ ಭೂಕಂಪ ಮತ್ತು ಭೂ ಕುಸಿತಕ್ಕೆ ಕಾರಣಗಳನ್ನು ಪತ್ತೆ ಮಾಡದ ಹಿನ್ನೆಲೆಯಲ್ಲಿ ಇದೀಗ ಮತ್ತೆ ಭೂಕಂಪಗಳು ಆಗುತ್ತಿವೆ. ಮಳೆಗಾಲದಲ್ಲಿ ಪ್ರವಾಹ, ಭೂ ಕುಸಿತದ ನಡುವೆ ಭೂಮಿಯ ಕಂಪನ ಮುಂದುವರಿದಿದ್ದು ಜನರು ನೆಮ್ಮದಿಯ ಜೀವನ ನಡೆಸಲಾಗುತ್ತಿಲ್ಲ. ಭೂಕಂಪ ಹೆಚ್ಚಳಕ್ಕೆ ಅಕ್ರಮ ರೆಸಾರ್ಟ್ ಹಾಗೂ ಗಣಿಗಾರಿಕೆಯೇ ಕಾರಣವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲು ಸರಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ. ಅಲ್ಲದೆ, ಮತ್ತೆ ಮತ್ತೆ ಭೂ ಕುಸಿತ ಸಂಭವಿಸುತ್ತಿರುವುದರಿಂದ ಸಹಸ್ರಾರು ಮಂದಿಗೆ ತೊಂದರೆಯಾಗುತ್ತಿದೆ. ಇಡೀ ಜಿಲ್ಲೆಯ ಪರಿಸರದ ಮೇಲೂ ಪರಿಣಾಮಗಳಾಗುತ್ತಿವೆ. ಆದರೂ ಸರಕಾರ ಅದಕ್ಕೆ ವೈಜ್ಞಾನಿಕ ಕಾರಣಗಳನ್ನು ಅರಿಯಲು ಮುಂದಾಗಿಲ್ಲ. ಹಾಗಾಗಿ ಸರಕಾರಕ್ಕೆ ಅಗತ್ಯ ಸೂಚನೆಗಳನ್ನು ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಗೀತಾ ಮಿಶ್ರ ಅವರು 25 ವರ್ಷಗಳಿಂದ ವಕೀಲಿ ವೃತ್ತಿ ಮಾಡುತಿದ್ದು 2015 ರಿಂದಲೂ ಸಾಮಾಜಿಕ ಕಾರಣಗಳ ಕುರಿತು 12-13 ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದಾರೆ. ರಿಟ್ ಸಲ್ಲಿಕೆಗೂ ಮುನ್ನ ತಮ್ಮ ತಂಡವು ಸಾಕಷ್ಟು ಅಧ್ಯಯನ ಮಾಡಿರುತ್ತೇವೆ ಎಂದು ತಿಳಿಸಿದ ಅವರು ಬೆಂಗಳುರಿನಲ್ಲಿ ಟ್ರಾಫಿಕ್ ಪೋಲೀಸರು ಬಾಡಿ ಕ್ಯಾಮೆರಾ ಧರಿಸದ ಕುರಿತು ರಿಟ್ ಅರ್ಜಿ ಸಲ್ಲಿಸಿದ ನಂತರ ಕೋರ್ಟು ಬಾಡಿ ಕ್ಯಾಮೆರಾ ಧರಿಸಲು ಆದೇಶ ನೀಡಿದೆ ಎಂದರು. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಲ್ಯಾಣದ ಕುರಿತೂ, ಬಿಡಿಏ , ಬಿಬಿಎಂಪಿ ಅವ್ಯವಹಾರ , ಅರಣ್ಯ ಭೂಮಿಯ ಅತಿಕ್ರಮಣ , ರಾಜಾಜಿನಗರದ ಫುಟ್
ಪಾತ್ ವ್ಯಾಪಾರಿಗಳ ತೆರವು ಕುರಿತೂ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಸಲ್ಲಿಸಿದ್ದು ಅವು ವಿಚಾರಣೆ ಹಂತದಲ್ಲಿವೆ.
ಇದಲ್ಲದೆ ರಾಜ್ಯದಲ್ಲಿ ಕೇಂದ್ರದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸೂಚನೆಯಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಖಾಸಗೀ ಟಿವಿ ಚಾನೆಲ್ ಗಳಿಗೆ ಮಾನಿಟರಿಂಗ್ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಟಿವಿ ಚಾನೆಲ್ ಗಳು ಪ್ರಸಾರಿಸುವ ಸುದ್ದಿ ಕುರಿತು ಸಾರ್ವಜನಿಕರಿಂದ ಬರುವ ದೂರನ್ನು ಆಲಿಸಲು ಆಯಾ ಚಾನೆಲ್ ಗಳು ನೋಡಲ್ ಆಫೀಸರ್ ಗಳನ್ನೂ ನೇಮಿಸಬೇಕೆಂದು ಅರ್ಜಿಯಲ್ಲಿ ಕೋರಿದ್ದು ಇದೆಲ್ಲವೂ ವಿಚಾರಣೆಯ ಹಂತದಲ್ಲಿವೆ.