ಬೆಂಗಳೂರು: ಪಿಎಸ್ಐ ಹಗರಣದಲ್ಲಿ ನನ್ನ ಪಾತ್ರವಿದೆ ಎಂದಾದರೆ ನಾನು ಮುಂದಿನ ಚುನಾವಣೆಗೆ ನಿಲ್ಲುವುದಿಲ್ಲ. ಕಾಂಗ್ರೆಸ್ ನವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರಲ್ಲಿ ನಾನು ಖಂಡಿತ ಭಾಗಿಯಾಗಿಲ್ಲ. ಇಂತಹ ಆರೋಪ ಮಾಡುವುದು ಸರಿಯಲ್ಲ ಎಂದರು. ಶಿಕಾರಿಪುರ ಟಿಕೆಟ್ ಬಗ್ಗೆ ಬಿಎಸ್ ವೈ ಘೋಷಣೆ ಕುರಿತಾಗಿ ಮಾತನಾಡಿದ ವಿಜಯೇಂದ್ರ, ಕುಟುಂಬ ರಾಜಕಾರಣದ ಬಗ್ಗೆ ನಾನು ಒಪ್ಪುವುದಿಲ್ಲ. ನಮ್ಮ ಪಕ್ಷವೂ ಕೂಡ ಈ ಬಗ್ಗೆ ಒಪ್ಪಲ್ಲ.
ಬಿಜೆಪಿಯಲ್ಲಿ ಹಲವು ವರ್ಷದಿಂದ ನಾನೂ ದುಡೀತಿದ್ದೇನೆ. ನಿವೃತ್ತಿ ನಂತರವೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆಂದು ಬಿಎಸ್ ವೈ ನಿನ್ನೆ ಹೇಳಿದ್ದಾರೆ. ನಾನು ಉಪಾಧ್ಯಕ್ಷನಾಗಿ ಅವರ ಮಾತಿಗೆ ಬದ್ದ. ಪಕ್ಷದ ಸೂಚನೆ ಏನಿದೆ ಅದರಂತೆ ನಡೆಯುತ್ತೇನೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಗೆ ಮೈಸೂರು ಅಥವಾ ಶಿಕಾರಿಪುರದಲ್ಲಿ ಸ್ಪರ್ಧೆಯ ಬಗ್ಗೆ ಮಾತನಾಡಿದ ಅವರು, ನಿನ್ನೆಯ ವಿಚಾರದ ಬಳಿಕ ಅನೇಕ ಚರ್ಚೆಗಳು ಆಗುತ್ತಿವೆ. ವೈಯಕ್ತಿಕ ಹಿತದೃಷ್ಟಿಯಿಂದ ಯಡಿಯೂರಪ್ಪ ಈಗ ನಿರ್ಧಾರ ತೆಗೆದುಕೊಂಡಿದ್ದಾರೆ. ಹಿಂದೆಯೂ ಅನೇಕ ನಿರ್ಧಾರ ಮಾಡಿದ್ದಾರೆ. ನಾನು ಶಿಕಾರಿಪುರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದರು.