ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ತಮ್ಮ ಹುಟ್ಟೂರಾದ ಕನಕಪುರ ತಾಲೂಕನ್ನು ಬೆಂಗಳೂರು ಜಿಲ್ಲೆಗೆ ಸೇರಿಸುವುದಾಗಿ ಹೇಳಿದ್ದಾರೆ.
ಕನಕಪುರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕನಕಪುರ ನಗರ ಬೆಂಗಳೂರಿಗೆ ಸೇರಲಿದೆ ಎಂದ ಹೇಳಿದ್ದಾರೆ. ಅಲ್ಲದೆ ತಮ್ಮ ಜಮೀನನ್ನು ಬೆಂಗಳೂರಿನ ಜನರಿಗೆ ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.
ಕನಕಪುರದ ಜನರು ರಾಮನಗರ ಜಿಲ್ಲೆಗೆ ಸೇರಿದವರಲ್ಲ, ಅವರು ಬೆಂಗಳೂರು ಜಿಲ್ಲೆಯವರು ಮತ್ತು ಅದನ್ನು ಮರೆಯಬಾರದು. ಈ ಎಲ್ಲಾ ಹಳ್ಳಿಗಳು ಒಂದಲ್ಲ ಒಂದು ದಿನ ಬೆಂಗಳೂರಿನ ಭಾಗವಾಗುತ್ತವೆ ಎಂಬ ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದ್ದಾರೆ. ನಿಮ್ಮ ಆಸ್ತಿಯ ಬೆಲೆಯನ್ನು ಹತ್ತು ಪಟ್ಟು ಹೆಚ್ಚಿಸುವ ಶಕ್ತಿಯನ್ನು ದೇವರು ನನಗೆ ನೀಡಿದ್ದಾನೆ. ನನಗೆ ಇಲ್ಲಿನ ಮಣ್ಣಿನೊಂದಿಗೆ ವಿಶೇಷ ಬಾಂಧವ್ಯವಿದೆ. ಇದೇ ಕಾರಣಕ್ಕೆ ಮೈಸೂರಿನಲ್ಲಿ ಮಹತ್ವದ ಕಾರ್ಯಕ್ರಮವಿದ್ದರೂ ನಾನು ಇಲ್ಲಿಗೆ ಬಂದಿದ್ದೇನೆ ಎಂದರು.