ಬೆಂಗಳೂರು: ಕಾವೇರಿ ನದಿಗೆ ಬರುತ್ತಿರುವ ಒಳ ಹರಿವಿನ ಕುರಿತು ಡಿಸಿಎಂ ಡಿ.ಕೆ.ಶಿವಕುಮಾರ್ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಅವರು ಅತಿ ಹೆಚ್ಚು ನೀರು ಬರುತ್ತಿದೆ ಅಂತ ಹೇಳಿದ್ದಾರೆ. ಆದರೆ, ಅಧಿಕಾರಿಗಳಿಂದ ಮಾಹಿತಿ ಪಡೆದಾಗ ಸುಮಾರು 2000 ಕ್ಯೂಸೆಕ್ಸ್ ನೀರು ಬರುತ್ತಿದೆ ಅಂತ ಹೇಳಿದ್ದಾರೆ. ಡಿಕೆಶಿವಕುಮಾರ್ ಅವರು ಯಾಕೆ ಜನರ ದಾರಿ ತಪ್ಪಿಸುತ್ತಿದ್ದಾರೆ. ಯಾಕೆ ಇಷ್ಟೊಂದು ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಡಿಸಿಎಂ ಯಾವಾಗಲೂ ಬ್ರಾಂಡ್ ಬೆಂಗಳೂರು ಅಂತ ಭಾಷಣ ಮಾಡಿದರೆ ಸಾಲದು, ಬೆಂಗಳೂರಿಗೆ ಕಾವೇರಿ ನೀರು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಬ್ಯಾಡ್ ಬೆಂಗಳೂರು ಆಗುತ್ತದೆ ಎಂದರು.
ಸಂಕಷ್ಟ ಸೂತ್ರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 2018 ಕ್ಕೂ ಮೊದಲು ಸಂಕಷ್ಟ ಸೂತ್ರ ಜಾರಿಗೊಳಿಸಲು ಈ ಪರಿಸ್ಥಿತಿ ಇರಲಿಲ್ಲ. ಸಿಡಬ್ಲ್ಯುಎಂಎ ಬಂದ ಮೇಲೆ ನೀರಿನ ಸಮಸ್ಯೆ ಈಗ ಬಂದಿದೆ. ಹೀಗಾಗಿ ಸಂಕಷ್ಟ ಸೂತ್ರ ಜಾರಿ ಮಾಡುವುದು ಅಹತ್ಯವಿದೆ ಎಂದು ಹೇಳಿದರು.