ಬೆಂಗಳೂರು, ಅ.7: ಸೆಪ್ಟೆಂಬರ್ 24ರಂದು ಶವವಾಗಿ ಪತ್ತೆಯಾಗಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯೊಬ್ಬರು ಹಿಂದಿನ ರಾತ್ರಿ ನಡೆದ ಗುಂಪು ದಾಳಿಯಲ್ಲಿ ಗಾಯಗೊಂಡು ಮೃತಪಟ್ಟಿದ್ದರು ಎಂದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬಂದ ಹಿನ್ನೆಲೆಯಲ್ಲಿ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 23 ರ ರಾತ್ರಿ, ಕೋಪಗೊಂಡ ಗುಂಪೊಂದು ಮಕ್ಕಳ ಕಳ್ಳನೆಂದು ಅನುಮಾನದ ಮೇಲೆ ಹಲ್ಲೆ ನಡೆಸಿದ ನಂತರ ಪೊಲೀಸರು ಅಪರಿಚಿತ ಶವವನ್ನು ಪತ್ತೆಹಚ್ಚಿದ್ದರು.
ಅಪರಿಚಿತ ದೇಹದ ಮೇಲೆ ಯಾವುದೇ ದೊಡ್ಡ ಗಾಯಗಳಾಗಿಲ್ಲದ ಕಾರಣ ಆರಂಭದಲ್ಲಿ ಸಿಆರ್ಪಿಸಿ 174 (ಸಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವೈಟ್ಫೀಲ್ಡ್ ಡಿಸಿಪಿ ಗಿರೀಶ್ ತಿಳಿಸಿದ್ದಾರೆ. ಆದಾಗ್ಯೂ, ಪೊಲೀಸರು ನಂತರ ಐಪಿಸಿಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿದರು, ಆಗ ಜನಸಮೂಹವು ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಅವರಿಗೆ ತಿಳಿಯಿತು.
ಮೃತನನ್ನು ಜಾರ್ಖಂಡ್ ಮೂಲದ ಸಂಜಯ್ ಟುಡು ಎಂದು ಗುರುತಿಸಲಾಗಿದ್ದು, ಆತ ನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಗುರುತಿಸಲು ಸುಮಾರು ಎಂಟು ದಿನಗಳು ಬೇಕಾಯಿತು, ನಂತರ ಜಾರ್ಖಂಡ್ ನಲ್ಲಿರುವ ಅವರ ಕುಟುಂಬಕ್ಕೆ ತಿಳಿಸಲಾಯಿತು ಎಂದು ಅವರು ಹೇಳಿದರು.
ಅಕ್ಟೋಬರ್ ೩ ರಂದು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಗುರುವಾರ ಬಂದ ವರದಿಯಲ್ಲಿ ಅವರ ಮೇಲೆ ಹಲ್ಲೆ ನಡೆದಿದ್ದು, ಹಲವಾರು ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.