ಸೋಮಣ್ಣ ಅವರೊಂದಿಗೆ ಇದ್ದು ಅವರ ಅಗಾಧ ವ್ಯಕ್ತಿತ್ವದಲ್ಲಿ ಸ್ವಲ್ಪವನ್ನು ನಮ್ಮದಾಗಿಸಿಕೊಂಡಿದ್ದೇವೆ. ಆದರೆ ಇಡೀ ಈ ವ್ಯಕ್ತಿತ್ವಕ್ಕೆ ಆ ಜೀವದಿಂದ ಪಡೆದಂತಹ ಒಂದು ಸೂಕ್ಷ್ಮತೆಗಳೇನಿದೆ ಅವುಗಳನ್ನು ಇವತ್ತು ನಾವು ನಮ್ಮದಾಗಿಸಿಕೊಂಡು ನಮ್ಮ ವ್ಯಕ್ತಿತ್ವಕ್ಕೆ ಅವರ ಕೊಡುಗೆಯನ್ನು ನೆನೆಯುತ್ತಿದ್ದೇವೆ. ನಾವು ಕಂಡುಕೊಳ್ಳಬೇಕಾದ, ಹುಡುಕಬೇಕಾದ ದಾರಿಯನ್ನು, ಗುರಿಯನ್ನು ತೋರಿಸಿದ ವ್ಯಕ್ತಿ ಇವರು. ರಂಗಭೂಮಿ ಹಾಗೂ ಸಿನಿಮಾ ಮಾಡುವಾಗ ಇವರ ಸಲಹೆಗಳನ್ನು ಪಡೆದುದು ಹೆಚ್ಚು ಎಂದು ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆದ ದಿ. ಹೆಚ್.ಜಿ. ಸೋಮಶೇಖರ ರಾವ್ ಅವರ ನೆನಪುಗಳನ್ನು ಮರುಕಳಿಸುವ “ಸೋಮಣ್ಣ- ಒಂದು ಸವಿನೆನಪು” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಘನತೆಗಾಗಿ, ಮಾನವೀಯತೆಗಾಗಿ, ಸಹಬಾಳ್ವೆಗಾಗಿ ದುಡಿದವರು ಸೋಮಣ್ಣ: ಸತ್ತವರೆಲ್ಲ ನಮ್ಮದೇಶದಲ್ಲಿ ಮಹಾತ್ಮರು, ಮಹಾನುಭಾವರು. ತ್ಯಾಗರಾಜರು ತಮ್ಮ ಕೃತಿಯನ್ನು ಶ್ರೀರಾಗದಲ್ಲಿ ಮಾಡಿದ್ಧಾರೆ. ಭಾಷೆ ಕೃತಿಕಾರರಿಗೆ ಹೇಗೆ ತಮ್ಮದೇ ಆದ ವ್ಯಕ್ತಿತ್ವ ಇರುತ್ತದೆಯೋ ಹಾಗೆಯೇ ರಾಗಕ್ಕೂ ವ್ಯಕ್ತಿತ್ವ ಇದೆ. ಭಕ್ತಿ, ಕರುಣ ಒಳಗೂಡಿದ ಆರ್ದತೆಯ ಘನರಾಗ ಅದು. ತ್ಯಾಗರಾಜರು ಶತಶತಮಾನಗಳಿಂದ ಕೇಳುತ್ತಿರುವ ಮನದಟ್ಟುಮಾಡಿಕೊಡಲು ಆಶಿಸುತ್ತಿರುವ ʻವಾರೆಂದರೋ ಮಹಾನುಭಾವುಲುʼ ಅಂದರೆ ಅಂಥವರು ಎಷ್ಟು ಜನ ಎಂಬ ಲೆಕ್ಕದಲ್ಲಿ ಸೋಮಣ್ಣ ಒಬ್ಬರು ಎಂಬುದೇ ನಿಜವಾದ ಮಾತು. ತ್ಯಾಗರಾಜರು ಯಾರನ್ನು ಹುಡುಕುತ್ತಿದ್ದರೋ, ಹುಡುಕಲು ನಮಗೆ ಬಿಟ್ಟುಹೋಗಿದ್ದಾರೋ ಆ ಮಹಾನುಭಾವರಲ್ಲಿ ಸೋಮಣ್ಣ ಒಬ್ಬರು. ಸೋಮಣ್ಣ ತಮ್ಮ ಜೀವನದುದ್ದಕ್ಕೂ ಬದುಕಿನ ಘನತೆಗಾಗಿ, ಮಾನವೀಯತೆಗಾಗಿ, ಸಹಬಾಳ್ವೆಗಾಗಿ ದಿನವಿಡೀ ಬದುಕಿದವರು, ದುಡಿದವರು. ಸದಾ ಜೀವನೋತ್ಸಾಹದಿಂದ ಮಿಡಿಯುತ್ತಿದ್ದವರು ಎಂದು ಸೋಮಣ್ಣನವರೊಂದಿಗಿನ ತಮ್ಮ ನೆನಪುಗಳನ್ನು ಸಾಹಿತಿ ಹರಿಹರಪ್ರಿಯ ಹಂಚಿಕೊಂಡರು.
ನೆನಪು ಸದಾ ಶಾಶ್ವತ: ಸೋಮಣ್ಣ ಮತ್ತು ನನ್ನ ಗೆಳೆತನ ಬಹಳ ಹಿಂದಿನಿಂದಲೇ ಶುರುವಾದ್ದು. ಅವರ ನಾಟಕಗಳನ್ನು ನೋಡಿದ್ದೇನೆ, ಆಸ್ವಾದಿಸಿದ್ದೇನೆ. ಅವರು ತುಂಬ ಪ್ರಭಾವಿತವಾಗಿ ಕೆಲಸ ಮಾಡುತ್ತಿದ್ದರು. ನಮ್ಮಿಬ್ಬರಿಗೂ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಅವರೊಂದಿಗಿನ ನೆನಪು ಸದಾ ಶಾಶ್ವತವಾಗಿರುತ್ತದೆ ಎಂದು ಅವರೊಂದಿಗೆ ಕಳೆದ ಕೆಲವು ದಿನಗಳ ಬಗ್ಗೆ ನಿವೃತ್ತ ಬ್ಯಾಂಕ್ ಉದ್ಯಮಿ ರಾಮದಾಸ್ ಮಾತನಾಡಿದರು.
ಕಲಾಮಂದಿರದೊಂದಿಗಿನ ನಂಟು: ಸೋಮಣ್ಣನಿಗೂ ಕಲಾಮಂದಿರಕ್ಕೂ ತುಂಬಾ ಹತ್ತಿರದ ನಂಟು. ಕಲೆ, ಸಾಹಿತ್ಯ ಇವರಿಗೆ ನೆಚ್ಚಿನ ವಿಷಯ ಹಾಗೂ ಅದಕ್ಕಾಗಿ ಅವರ ಸೇವೆ ಅಪಾರವಾದದ್ದು. ಅನೇಕ ಸಂದರ್ಭಗಳಲ್ಲಿ ಇವರ ಸಲಹೆ, ಸಹಕಾರಗಳು ನನಗೆ ದೊರೆತಿವೆ. ಎಲ್ಲರ ಮನಸ್ಸಿನಲ್ಲಿ ಪ್ರಗತಿಪರ ಚಿಂತನೆಗಳನ್ನು ಬಿತ್ತಿ ಎಲ್ಲವನ್ನೂ ಅನುಭವಗಳ ಮೂಲಕ ಕಟ್ಟಿಕೊಟ್ಟವರು ಎಂದು ಪತ್ರಕರ್ತೆ, ರಂಗಭೂಮಿ ಕಲಾವಿದೆ ಡಾ. ವಿಜಯಮ್ಮ ಹೇಳಿದರು.