ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅ.14 ರಿಂದ 16 ರ ವರೆಗೆ ಒಡಿಶಾ ರಾಜ್ಯದ ವಿಭಿನ್ನ ಹಾಗೂ ಅಪರೂಪದ ಕಲೆ, ಸಂಗೀತ, ನಾಟಕ, ಸಾಹಿತ್ಯ ಪ್ರಕಾರಗಳನ್ನೊಳಗೊಂಡ ವೈಭವದ “ಒಡಿಷಾ ಉತ್ಸವ” ಆಯೋಜಿಸಲಾಗಿದೆ.
ಒಡಿಷಾ ಉತ್ಸವದ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಒಡಿಶಾ ಸರ್ಕಾರದ ಒಡಿಯಾ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಮತ್ತು ಹೆಚ್ಚುವರಿ ಕಾರ್ಯದರ್ಶಿ ರಂಜನ್ ಕುಮಾರ್ ದಾಸ್ ಮಾತನಾಡಿ, ಒಡಿಶಾ ಸರ್ಕಾರದ ವಿವಿಧ ನಿಗಮಗಳು, ಉಭಯ ರಾಜ್ಯಗಳ ರಂಗ ಕರ್ಮಿಗಳು, ಸಾಹಿತ್ಯ ದಿಗ್ಗಜರು ಉತ್ಸವದಲ್ಲಿ ಭಾಗಿಯಾಗಲಿದ್ದು, ಒಡಿಶಾ ಉತ್ಸವಕ್ಕೆ ಮೆರಗು ನೀಡಲಿದ್ದಾರೆ. ಒಡಿಶಾದ ಬಹುತೇಕ ಕಲಾ ಪ್ರದರ್ಶನಗಳಿಗೆ ಮೂರು ದಿನಗಳ ಕಾಲ ವೇದಿಕೆ ಕಲ್ಪಿಸಿದ್ದು, ರಾಜ್ಯದ ಯಕ್ಷಗಾನ, ಜಾನಪದ ಮತ್ತಿತರ ಕಲಾ ತಂಡಗಳು ಶೀಘ್ರದಲ್ಲೇ ಒಡಿಶಾದಲ್ಲಿ ಪ್ರದರ್ಶನ ನೀಡಲಿವೆ ಎಂದರು.
ಅ.14ರಂದು ಶುಕ್ರವಾರ ಸಂಜೆ 6.30 ಕ್ಕೆ ಒಡಿಷಾ ಉತ್ಸವವನ್ನು ಒಡಿಶಾ ಪ್ರವಾಸೋದ್ಯಮ, ಒಡಿಶಾ ಭಾಷೆ, ಸಾಹಿತ್ಯ – ಸಂಸ್ಕೃತಿ ಸಚಿವ ಅಶ್ವಿನಿ ಕುಮಾರ್ ಪಾತ್ರ ಉದ್ಘಾಟಿಸಲಿದ್ದು, ಒಡಿಶಾದ ಹೊರಗೆ ಇದೇ ಮೊದಲ ಬಾರಿಗೆ ಒಡಿಶಾ ಉತ್ಸವ ಆಯೋಜಿಸಲಾಗಿದೆ. ಸಮಾರಂಭದಲ್ಲಿ ಒಡಿಶಾದ ಗಣ್ಯರು ಮತ್ತು ಕರ್ನಾಟಕದ ಅತಿಥಿಗಳಾದ ಸುಧಾ ಮೂರ್ತಿ (ಇನ್ಫೋಸಿಸ್), ಅನೂರ್ ಅನಂತ ಕೃಷ್ಣ ಶರ್ಮಾ (ನಿರ್ದೇಶಕರು, ಸಂಗೀತ ನೃತ್ಯ ಅಕಾಡೆಮಿ), ನಿರುಪಮಾ ರಾಜೇಂದ್ರ, ಪ್ರವೀಣ್ ಡಿ ರಾವ್, ಅನನ್ಯ ರಾಘನವೇಂದ್ರ, ಮಂಜುನಾಥ್ ಬಿ.ಸಿ, ವೀಣಾ ಮೂರ್ತಿ ವಿಜಯ್ ಭಾಗವಹಿಸಲಿದ್ದಾರೆ. ಒಡಿಶಾ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷ ಅರುಣಾ ಮೊಹಂತಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ವಿಶ್ವ ವಿಖ್ಯಾತ ಪುರಿ ಜಗನ್ನಾಥ್, ಭಗವಾನ್ ವಿಷ್ಣು ಆಧಾರಿತ ಆಯ ನೀಳ ಸಯಿಳೋ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದ್ದು, ಇದು ಒಡಿಶಾದಲ್ಲಿ ಅತ್ಯಂತ ಜನಪ್ರಿಯ ಮತ್ತು ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ನಾಟಕವಾಗಿದೆ. ಸಾಹಿತ್ಯಗೋಷ್ಠಿಗಳಲ್ಲಿ ಚಂದ್ರಶೇಖರ ಕಂಬಾರ, ಎಚ್.ಎಚ್. ಶಿವಪ್ರಕಾರ್, ಒಡಿಶಾದ ಖ್ಯಾತ ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ಮೂಲಕ ಒಡಿಶಾದ ಭವ್ಯ ಮತ್ತು ಶ್ರೇಷ್ಠ ಸಾಂಸ್ಕೃತಿಕ ವಲಯದ ವಿಶೇಷತೆಗಳನ್ನು ಹೂಡಿಕೆ ಮಾಡಲು ಕರ್ನಾಟಕಕ್ಕೆ ಬಂದಿದ್ದೇವೆ ಎಂದರು.
ಇದಲ್ಲದೇ ಒಡಿಶಾದ ಖ್ಯಾತ ಪಟಚಿತ್ರ ಕಲಾ ಪ್ರಕಾರವನ್ನು ಅಲ್ಲಿನ ರಘುರಾಜ್ ಪುರ್ ಹಳ್ಳಿಯ ಕಲಾವಿದರು ಪ್ರದರ್ಶಿಸಲಿದ್ದಾರೆ. ಒಣಗಿದ ಎಲೆಯಲ್ಲಿ ರಾಮಾಯಣ, ಮಹಾಭಾರತ ಮತ್ತಿತರ ವಿಷಯಗಳ ಬಗ್ಗೆ ಕಲಾ ರಚನೆಗಳನ್ನು ಇವರು ಮಾಡಲಿದ್ದಾರೆ. ಗೋಡಾ ನಾಚ್, ಸಂಬಲ್ ಪುರಿ ನೃತ್ಯ, ಚಾವ್ ಡಾನ್ಸ್ ಒಳಗೊಂಡಂತೆ ತುಂಬಾ ಅಪರೂಪದ ನೃತ್ಯ ಪ್ರದರ್ಶನ ಜೊತೆಗೆ ವೈವಿಧ್ಯಮಯ ಜಾನಪದ ನೃತ್ಯ, ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಒಟ್ಟಾರೆ ಕಲೆ, ಸಂಸ್ಕೃತಿ, ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಿದ್ದೇವೆ ಎಂದು ಅಶ್ವಿನಿ ಕುಮಾರ್ ಪಾತ್ರ ಹೇಳಿದರು.