ಬೆಂಗಳೂರು: ಅತಿದೊಡ್ಡ ಅಣೆಕಟ್ಟೆಗಳಲ್ಲಿ ಒಂದಾದ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರಪ್ರದೇಶದಲ್ಲಿದೆ ಎಂದು ಸಿಬಿಎಸ್ಇ ಪಠ್ಯಪುಸ್ತಕದಲ್ಲಿ ತಪ್ಪು ಮಾಹಿತಿ ನೀಡಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ವಿರೋಧ ವ್ಯಕ್ತಪಡಿಸಿದರು.
“ಸಿಬಿಎಸ್ಇ ನಾಲ್ಕನೇ ತರಗತಿ ಪಠ್ಯಪುಸ್ತಕದಲ್ಲಿ ದೇಶದ ಪ್ರಮುಖ ವಿವಿಧೋದ್ದೇಶ ನದಿ ಯೋಜನೆಗಳ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ ತುಂಗಭದ್ರಾ ನೀರಾವರಿ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿರುವ, ಬರೋಬ್ಬರಿ 135 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಅಣೆಕಟ್ಟು ಅಥವಾ ಪಂಪ ಸಾಗರವನ್ನು ಆಂಧ್ರ ಪ್ರದೇಶದಲ್ಲಿರುವ ಯೋಜನೆ ಎಂದು ಮಕ್ಕಳಿಗೆ ಕಲಿಸುವುದು ಎಷ್ಟು ಸರಿ?” ಎಂದು ಮೋಹನ್ ದಾಸರಿ ಪ್ರಶ್ನಿಸಿದರು.
ಸಾಮಾಜಿಕ ಜಾಲತಾಣ ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಮೋಹನ್ ದಾಸರಿ, “ನನ್ನ ಮಗನ ಪಠ್ಯಪುಸ್ತಕದ ನೀರಿನ ಸಂಪನ್ಮೂಲಗಳು ಪಾಠದಲ್ಲಿ ತುಂಗಭದ್ರ ಯೋಜನೆಯು ಆಂಧ್ರ ಪ್ರದೇಶದಲ್ಲಿದೆ ಎಂದು ಹೇಳಲಾಗಿದೆ.
ಇಂದೆಂತಹಾ ನಾಚಿಕೆಯ ವಿಷಯ ಸಿಎಂ ಬಸವರಾಜ ಬೊಮ್ಮಾಯಿಯವರೇ? ನಿಮ್ಮ ಶಿಗ್ಗಾವಿ ಕ್ಷೇತ್ರದಲ್ಲೂ ಹರಿಯುವ ತುಂಗಭದ್ರಾ ನದಿಗೆ ಸಂಬಂಧಿಸಿದ ಯೋಜನೆ ಬಗ್ಗೆಯೇ ತಪ್ಪು ಮಾಹಿತಿ ನೀಡಲಾಗಿದೆ” ಎಂದು ಮುಖ್ಯಮಂತ್ರಿಯವರನ್ನು ಕುಟುಕಿದ್ದಾರೆ.