News Karnataka Kannada
Tuesday, April 30 2024
ಬೆಂಗಳೂರು ನಗರ

ಬೆಂಗಳೂರು: ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಸಂಬಂಧಿಸಿ 7 ಜಿಲ್ಲೆಗಳ ಪದಾಧಿಕಾರಿಗಳ ಸಭೆ

Madhu
Photo Credit : News Kannada

ಬೆಂಗಳೂರು: ಇಂದು ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ವಿಭಾಗದ 7 ಜಿಲ್ಲೆಗಳ ಪದಾಧಿಕಾರಿಗಳ ಸಭೆಯನ್ನು ಮಾಡಲಾಗಿದೆ ಎಂದು ವಿಧಾನಸಭೆಯ ಸದಸ್ಯರಾದ ಮಧು ಬಂಗಾರಪ್ಪ ಹೇಳಿದರು.

ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಧು ಬಂಗಾರಪ್ಪ ನಾನು ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷನಾಗಿ ಮೂರು ತಿಂಗಳಾಗಿದ್ದು, ಇವತ್ತಿನವರೆಗೂ 21 ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಇನ್ನು 10 ಜಿಲ್ಲೆ ಪ್ರವಾಸ ಮಾಡಿದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಭೆ ಮಾಡಿದಂತಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಾಗಿ ಮತಗಳು ಬರುವುದು ಒಬಿಸಿ ವರ್ಗದಿಂದ. ಈ ಮತಗಳು ಚದುರಿದ್ದಾವೆಯೇ ಇಲ್ಲವೇ ಎಂಬ ವಿಚಾರವಾಗಿ ಚರ್ಚೆ ಮಾಡಿ ಈ ಎಲ್ಲ ಮತಗಳನ್ನು ಪಕ್ಷದತ್ತ ಸೆಳೆಯಲು ಪೂರ್ವಯೋಜಿನತವಾಗಿ ಸಂಘಟನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಶೇ.55ರಷ್ಟು ಮತದಾರರು ಹಿಂದುಳಿದ ವಗರ್ಗಗಳಿಗೆ ಸೇರಿದ್ದು, ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

ಎಲ್ಲ ಜಿಲ್ಲೆಗಳಲ್ಲಿ ಇರುವ ಸಣ್ಣ ಪುಟ್ಟ ಸಮುದಾಯಗಳನ್ನು ಮುಂಚೂಣಿಗೆ ತರಲು, ಪಕ್ಷದ ಸಂಘಟನೆಯಲ್ಲಿ ಅಧಿಕಾರ ನೀಡಿ ಅಧಿಕಾರದ ಪಾಲುದಾರನಾಗಿ ಮಾಡುವಂತೆ ಪಕ್ಷದ ನಾಯಕರು ನನಗೆ ಕಾರ್ಯಸೂಚಿ ನೀಡಿದ್ದಾರೆ. ಈ ಆಧಾರದ ಮೇಲೆ ಪದಾಧಿಕಾರಿಗಳ ನೇಮಕ ಮಾಡಲಾಗುತ್ತಿದೆ.

ಇನ್ನು ಜನವರಿ 15ರ ನಂತರ ಹಾಗೂ ಫೆ.15ರ ಒಳಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಒಬಿಸಿ ಸಮಾವೇಶಗಳನ್ನು ಮಾಡಲಾಗುತ್ತಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಭಾಗವಹಿಸಬೇಕು ಎಂಬ ಸಾಕಷ್ಟು ಆಸೆ ಇದೆ. ಆದರೆ ಅವರು ರಾಜ್ಯ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಎಲ್ಲ ಜಿಲ್ಲೆಗಳ ಸಮಾವೇಶದಲ್ಲಿ ಭಾಗವಹಿಸಲು ಆಗುವುದಿಲ್ಲ. ಹೀಗಾಗಿ ಕಾರ್ಯಾಧ್ಯಕ್ಷರು, ಮಾಜಿ ಸಚಿವರು ಹಾಗೂ ಶಾಸಕರನ್ನು ಸೇರಿಸಿಕೊಂಡು ಪ್ರತಿ ಜಿಲ್ಲೆಯಲ್ಲಿ ಒಂದು ಜಿಲ್ಲಾ ಸಮಾವೇಶಗಳನ್ನು ಮಾಡಲಾಗುವುದು.

ಕೆಲವು ಜಿಲ್ಲೆಗಳಲ್ಲಿ ಎರಡು ಮೂರು ಸಮಾವೇಶ ಮಾಡಲಾಗುವುದು ಎಂದು ಹೇಳುತ್ತಿದ್ದಾರೆ. ಹೀಗಾಗಿ ಒಂದು ಜಿಲ್ಲೆಯಲ್ಲಿ ಕನಿಷ್ಠ ಒಂದು ಸಮಾವೇಶ ಮಾಡಲು ನಿರ್ಧರಿಸಲಾಗಿದೆ.

ನಂತರ ಮೂರನೇ ಹಂತದಲ್ಲಿ ರಾಜ್ಯ ಮಟ್ಟದ ಹಿಂದುಳಿದ ಸಮಾವೇಶ ಮಾಡುವಂತೆ ರಾಹುಲ್ ಗಾಂಧಿ ಅವರೇ ಸೂಚನೆ ನೀಡಿದ್ದು, ಆ ಸಮಾವೇಶಕ್ಕೆ ರಾಹುಲ್ ಗಾಂಧಿ ಅವರು ಆಗಮಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲ ವಾರದಲ್ಲಿ ರಾಜ್ಯದ ಮಧ್ಯ ಭಾಗದಲ್ಲಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ.

ರಾಜ್ಯದಲ್ಲಿನ ಜಿಲ್ಲೆಗಳನ್ನು ಮೂರು ಭಾಗಗಳಾಗಿ ಮಾಡಿಕೊಂಡು ಪ್ರತಿಯೊಂದು ಭಾಗಕ್ಕೂ ಒಬ್ಬರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ವರದರಾಜ್, ಮುರುಳಿ ಹಾಗೂ ಎಐಸಿಸಿ ಒಬಿಸಿ ವಿಭಾಗದ ಉಸ್ತುವಾರಿಗಳಿಗೆ ಈ ಜವಾಬ್ದಾರಿ ನೀಡಲಾಗಿದೆ.

ಹಿಂದುಳಿದ ವರ್ಗಗಳ ವಿಶ್ವಾಸ ತೆಗೆದುಕೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ನಾನು ಚುನಾವಣಾ ಪ್ರಚಾರ ಸಮಿತಿಯ ಭಾಗವೂ ಆಗಿದ್ದೇನೆ. ಇಷ್ಟು ವರ್ಷಗಳಿಂದ ಕಾಂಗ್ರೆಸ್ ಯಾವುದೇ ಕಾರ್ಯಕ್ರಮ ನೀಡಿದರೂ ಹಿಂದುಳಿದ ವರ್ಗಗಳಿಗೆ ಸಹಕಾರ ನೀಡುವ ಕಾರ್ಯಕ್ರಮ ನೀಡಿದೆ. ಆಶ್ರಯ ಮನೆ, ಸಿದ್ದರಾಮಯ್ಯ ಅವರ ಭಾಗ್ಯಗಳು, ಭೂ ಹಕ್ಕು ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸಹಕಾರಿಯಾಗಿವೆ. ಆದರೆ ಬಿಜೆಪಿ ನಾಯಕರು ಬಹಳ ಆವೇಷದಿಂದ, ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅವರು ಕೆಲಸದ ಆಧಾರದ ಮೇಲೆ ಮತ ಕೇಳುವುದಿಲ್ಲ, ಜಾತಿ, ಧರ್ಮದ ಭಾವನಾತ್ಮಕ ವಿಚಾರದ ಮೇಲೆ ಮತ ಕೇಳುತ್ತಾರೆ.

ಜನರು ಭಾವನಾತ್ಮಕ ವಿಚಾರವಾಗಿ ಹೋದಾಗ ಹೊಟ್ಟೆ ತುಂಬುವುದಿಲ್ಲ ಎಂದು ಅರಿತಿದ್ದಾರೆ. ಬಿಜೆಪಿಯವರು ಮನುಷ್ಯತ್ವ ಮರೆತು ರಾಜಕಾರಣ, ಅಧಿಕಾರ ಮಾಡುತ್ತಿದ್ದಾರೆ. ಈ ರಾಜ್ಯವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಜನ ಇವರಿಗೆ ಅಧಿಕಾರ ನೀಡಿರುವುದು ರಾಜ್ಯವನ್ನು ಒಗ್ಗೂಡಿಸಿ ಕೆಲಸ ಮಾಡಲು ಆದರೆ ಅವರು ಅದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಈ ಪ್ರಯತ್ನವನ್ನು ನಿಲ್ಲಸಬೇಕಾಗಿದೆ. ಇದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಜನರು ಕೂಡ ಇಂದು ಬದಲಾವಣೆಗೆ ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ನಮಗೆ ಬೇಕಾದ ಕಾರ್ಯಕ್ರಮ ನೀಡಿದ್ದರು ಎಂದು ಭಾವಿಸಿದ್ದಾರೆ. ಪಕ್ಷದ ಎಲ್ಲ ವಿಭಾಗಗಳ ಪೈಕಿ ಒಬಿಸಿ ವಿಭಾಗದಿಂದ ಹೆಚ್ಚಿನ ಸಮಾವೇಶ ಮಾಡಬೇಕು ಎಂದು ನಾವು ಗುರಿ ಇಟ್ಟುಕೊಂಡಿದ್ದೇವೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವೂ ಇದೆ.

ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಮಲಿಂಗಾರೆಡ್ಡಿ:

ಬೆಂಗಳೂರು ವಿಭಾಗದ 7 ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದ ಸಮಾವೇಶವನ್ನು ಜನವರಿಯಲ್ಲಿ ಮಾಡಲಾಗುವುದು. ಯಾವಾಗ ಎಲ್ಲಿ ಯಾವ ಸಭೆ ಮಾಡಬೇಕು ಎಂದು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು, ಹಿಂದುಳಿದ ವರ್ಗದ ಅಧ್ಯಕ್ಷರು, ಉಸ್ತುವಾರಿ ಜವಾಬ್ದಾರಿ ನೀಡಿರುವವರು ಸೇರಿ ಸಮಾವೇಶಗಳ ಆಯೋಜನೆ ಬಗ್ಗೆ ಚರ್ಚೆ ಮಾಡುತ್ತಾರೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಬಸ್ ಯಾತ್ರೆ ಮಾಡುತ್ತಿರುವುದರಿಂದ ಎಲ್ಲಾ ಜಿಲ್ಲೆಗಳ ಸಮಾವೇಶಕ್ಕೆ ಆಗಮಿಸಲು ಆಗುವುದಿಲ್ಲ. ಮಾಜಿ ಸಚಿವರು, ಸಂಸದರು ಹಾಗೂ ಇತರ ಹಿರಿಯ ನಾಯಕರೆಲ್ಲರೂ ಈ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರಿನಲ್ಲಿ ಮೂರು ಜಿಲ್ಲಾ ಕಾಂಗ್ರೆಸ್ ಇದ್ದರೂ 1 ಕಡೆ ದೊಡ್ಡ ಮಟ್ಟದಲ್ಲಿ ಸಮಾವೇಶ ಮಾಡುತ್ತೇವೆ. ಉಳಿದಂತೆ ಗ್ರಾಮಾಂತರ, ಚಿಕ್ಕಬಳ್ಳಾಪುರ ಕೋಲಾರ ಹಾಗೂ ಇತರ ಜಿಲ್ಲೆಗಳಲ್ಲಿ ಪ್ರತ್ಯೇಕ ಸಮಾವೇಶ ಮಾಡಲಾಗುವುದು.

ಸಾರ್ವಕರ್ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಈ ವಿಚಾರ ಗಮನ ಬೇರೆಡೆ ಸೆಳಎಯುವುದು ಬೇಡ. ಈ ವಿಚಾರವಾಗಿ ನಾವು ಬೇರೆ ಸಮಯದಲ್ಲಿ ಮಾತನಾಡುತ್ತೇವೆ’ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು