ಬೆಂಗಳೂರು: ಪೋಕ್ಸೊ ಕಾಯಿದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ಹೇಳಿದರು.
ಬಾಲನ್ಯಾಯ ಸಮಿತಿ, ಕರ್ನಾಟಕ ಹೈಕೋರ್ಟ್, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗೃಹ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಎನ್ಪೋಲ್ಡ್ ಪ್ರೊ ಆಕ್ಟಿವ್ ಹೆಲ್ತ್ಟ್ರಸ್ಟ್ ಮತ್ತು ಯುನಿಸೆಫ್ ಸಹಯೋಗದೊಂದಿಗೆ ಬೆಂಗಳೂರಿನ ನ್ಯಾಯಾಂಗ ಅಕಾಡೆಮಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯ ಮಟ್ಟದ ಬಹುಪಾಲುದಾರರ ಸಮಾಲೋಚನೆ ಹಾಗೂ ಪೋಕ್ಸೊ ಕಾಯಿದೆಯಡಿ ಪರಿಣಾಮಕಾರಿ ಅನುಷ್ಠಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಮಕ್ಕಳು ಜಗತ್ತನ್ನು ನಿರ್ಮಿಸುತ್ತಾರೆ. ಇಂತಹ ಮಕ್ಕಳ ಮೇಲಾಗುವ ಲೈಂಗಿಕ ಶೋಷಣೆ ಮತ್ತು ಲೈಂಗಿಕ ದುರುಪಯೋಗಗಳನ್ನು ತಡೆಗಟ್ಟಲು ನವೆಂಬರ್ 14, 2012ರಲ್ಲಿ ಮಕ್ಕಳ ರಕ್ಷಣಾ ಕಾಯ್ದೆಯು ಜಾರಿಗೆ ಬಂದಿದೆ ಎಂದು ತಿಳಿಸಿದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಬಾಲನ್ಯಾಯ ಸಮಿತಿ ಅಧ್ಯಕ್ಷರಾದ ಶ್ರೀಮತಿ ಕೆ.ಎಸ್. ಮುದಗಲ್ ಮಾತನಾಡಿ, ಪ್ರತಿಯೊಂದು ಮಗುವು ವಿಭಿನ್ನ ರೀತಿಯ ಹೂವುಗಳನ್ನು ಒಟ್ಟುಗೂಡಿಸಿ ಸುಂದರ ಉದ್ಯಾನದ ಮೇಲೆ ಈ ಜಗತ್ತನ್ನು ರೂಪಿಸುತ್ತದೆ ಎಂದು ಉಚ್ಚನ್ಯಾಯಾಲಯವು ಹೇಳಿದ್ದು, ಇಂತಹ ಮಕ್ಕಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಾಗಾರದಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕರ್ನಾಟಕ ನ್ಯಾಯಾಂಗ ಅಕಾಡೆಮಿ ಅಧ್ಯಕ್ಷರಾದ ಅಲೋಕ್ ಅರಾದೆ, ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಾಧ್ಯಕ್ಷರಾದ ಬಿ.ವೀರಪ್ಪ, ಗೃಹ ಇಲಾಖೆಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ: ರಜನೀಶ್ ಗೋಯೆಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶ್ರೀಮತಿ ಡಾ: ಎನ್. ಮಂಜುಳಾ, ಯುನಿಸೆಫ್ ಮಕ್ಕಳ ರಕ್ಷಣಾ ತಜ್ಞರಾದ ಸೋನಿಕುಟ್ಟಿ ಜಾರ್ಜ್, ಕೆಎಸ್ಸಿಪಿಸಿಆರ್ನ ಅಧ್ಯಕ್ಷರಾದ ಕೆ.ನಾಗಣ್ಣಗೌಡ ಉಪಸ್ಥಿತರಿದ್ದರು.