ಬೆಂಗಳೂರು, ಸೆ.29: ದಸರಾ ಹಬ್ಬದ ಪ್ರಯುಕ್ತ ಕರ್ನಾಟಕ ಚಿತ್ರಕಲಾ ಪರಿಷತ್ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 9ರವರೆಗೆ ಆರ್ಟಿಸಾನ್ಸ್ ಬಜಾರ್ (ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ) ಅನ್ನು ಆಯೋಜಿಸಿತ್ತು. 11 ದಿನಗಳ ಕಾಲ ನಡೆಯಲಿರುವ ಈ ಮೇಳವನ್ನು ಕಾಂಗ್ರೆಸ್ ನಾಯಕಿ ಕುಸುಮಾ ಎಚ್ ಹಾಗೂ ರೂಪದರ್ಶಿ ಡಾ.ಶೃತಿ ಗೌಡ ಅವರು ಉದ್ಘಾಟಿಸಿದರು.
ಈ ಮೇಳವನ್ನು ಉದ್ಘಾಟಿಸಿದ ಕಾಂಗ್ರೆಸ್ ನ ಹಿರಿಯ ನಾಯಕಿ ಕುಸುಮಾ ಎಚ್ ಅವರು ಮಾತನಾಡುತ್ತಾ “ದಸರಾ ಹಬ್ಬದ ಪ್ರಯುಕ್ತ ಚಿತ್ರಕಲಾ ಪರಿಷತ್ ಆಯೋಜಿಸಿದ ಈ ಆರ್ಟಿಸಾನ್ಸ್ ಬಜಾರ್ ನೋಡುವುದಕ್ಕೆ ತುಂಬಾನೇ ಅದ್ಭುತವಾಗಿದೆ.ಇಲ್ಲಿ ಸಾಕಷ್ಟು ಮಳಿಗೆಗಳಿವೆ. ಒಂದೇ ಜಾಗದಲ್ಲಿ ವಿವಿಧ ಬಗೆಯ ವಸ್ತುಗಳು ಸಿಗಲಿವೆ.ಮಧ್ಯವರ್ತಿಗಳಿಲ್ಲದೇ ತಯಾರಕರಿಂದ ನೇರವಾಗಿ ಗ್ರಾಹಕರಿಗೆ ಇಲ್ಲಿ ವಸ್ತುಗಳು ದೊರಕಲಿವೆ. ಇಲ್ಲಿರುವ ವಸ್ತುಗಳ ಗುಣಮಟ್ಟ ಕೂಡ ಚೆನ್ನಾಗಿದೆ. ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳು, ಉಡುಪುಗಳು ಎಲ್ಲವೂ ಇಲ್ಲಿ ಸಿಗಲಿವೆ” ಎಂದು ಆರ್ಟಿಸಾನ್ಸ್ ಬಜಾರ್ ಬಗ್ಗೆ ತಮ್ಮ ಖುಷಿ ಹಂಚಿಕೊಂಡರು.
ಇನ್ನು ಇಲ್ಲಿನ ಸಂಗ್ರಹದ ಕುರಿತು ಮಾತನಾಡಿದ ರೂಪದರ್ಶಿ ಡಾ. ಶೃತಿ ಗೌಡ “ನವರಾತ್ರಿ ಎಂದರೆ ಹೆಣ್ಣುಮಕ್ಕಳಿಗೆ ವಿಶೇಷವಾದ ಪ್ರೀತಿ ಹಾಗೂ ಸಂಭ್ರಮವಿರುತ್ತದೆ. ಚಿತ್ರಕಲಾ ಪರಿಷತ್ತು ಆಯೋಜಿಸಿದ ಈ ಆರ್ಟಿಸಾನ್ಸ್ ಬಜಾರ್ ಕಣ್ಣಿಗೆ ಮುದ ನೀಡುವುದರ ಜೊತೆಗೆ ತುಂಬಾನೇ ಆಕರ್ಷಕವಾಗಿದೆ.ಇಲ್ಲಿರುವ ಸಂಗ್ರಹ ಒಂದಕ್ಕಿಂತ ಒಂದು ತುಂಬಾನೇ ಚೆನ್ನಾಗಿದೆ.ಇಲ್ಲಿರುವ ಉಡುಪುಗಳು, ಅಲಂಕಾರಿಕ ವಸ್ತುಗಳು ಕೈಗೆಟಕುವ ದರದಲ್ಲಿ ಲಭ್ಯವಿರುವುದರಿಂದ ಯಾರು ಬೇಕಾದರೂ ಕೊಂಡುಕೊಳ್ಳಬಹುದಾಗಿದೆ” ಎಂದು ಈ ಬಜಾರ್ ನ ಕುರಿತು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.