ಬೆಂಗಳೂರು: 2022ನೇ ಸಾಲಿನ ಕನ್ನಡರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿದ್ದು, 67 ಮಂದಿ ಸಾಧಕರು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಅಂತಿಮಗೊಳಿಸಿದ್ದರು. ಭಾನುವಾರ ಸಂಜೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಚಲನಚಿತ್ರ ಕ್ಷೇತ್ರದಲ್ಲಿ ದತ್ತಣ್ಣ, ಅವಿನಾಶ್, ಕಿರುತೆರೆ-ಸಿಹಿಕಹಿ ಚಂದ್ರು, ಸಂಕೀರ್ಣ ಕ್ಷೇತ್ರದಲ್ಲಿ ಸುಬ್ಬರಾಮ ಶೆಟ್ಟಿ, ಆರ್ವಿ ಸಂಸ್ಥೆಗಳು, ವಿದ್ವಾನ್ ಗೋಪಾಲಕೃಷ್ಣ ಶರ್ಮಾ, ಸೋಲಿಗರ ಮಾದಮ್ಮ, ರಕ್ಷಣಾ ಕ್ಷೇತ್ರದಲ್ಲಿ ಸುಬೇದಾರ್ ಬಿ.ಕೆ.ಕುಮಾರಸ್ವಾಮಿ ಪತ್ರಿಕೋದ್ಯಮ-ಹೆಚ್.ಆರ್.ಶ್ರೀಶಾ, ಜಿ.ಎಂ.ಶಿರಹಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಕೆ.ಶಿವನ್, ಡಿ.ಆರ್.ಬಳೂರಗಿ, ಕೃಷಿಯಲ್ಲಿ ಗಣೇಶ್ ತಿಮ್ಮಯ್ಯ, ಚಂದ್ರಶೇಖರ್ ನಾರಾಯಣಪುರ, ಪರಿಸರ ರಕ್ಷಣೆಗೆ ಸಾಲುಮರದ ನಿಂಗಣ್ಣ, ಪೌರಕಾರ್ಮಿಕ ಕ್ಷೇತ್ರದಲ್ಲಿ ಮಲ್ಲಮ್ಮ ಹೂವಿನಹಡಗಲಿ, ಆಡಳಿತ ವಿಭಾಗದಲ್ಲಿ ಎಲ್.ಹೆಚ್.ಮಂಜುನಾಥ್, ಮದನ್ ಗೋಪಾಲ್, ಹೊರನಾಡು ಸಾಧಕರಾದ ದೇವಿದಾಸ ಶೆಟ್ಟಿ, ಅರವಿಂದ್ ಪಾಟೀಲ್, ಕೃಷ್ಣಮೂರ್ತಿ ಮಾಂಜಾ, ಹೊರದೇಶದಲ್ಲಿ ಸಾಧನೆಗೈದ ಕನ್ನಡಿಗರಾದ ಗಲ್ಫ್ ನ ರಾಜ್ಕುಮಾರ್ ಅವರು ಆಯ್ಕೆ ಯಾಗಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಹೆಚ್.ಎಸ್.ಮೋಹನ್, ಡಾ.ಬಸವಂತಪ್ಪ, ರಂಗಭೂಮಿಯಲ್ಲಿ ತಿಪ್ಪಣ್ಣ ಹೆಳವರ್, ಲಲಿತಾಬಾಯಿ ಚನ್ನದಾಸರ್, ಗುರುನಾಥ್ ಹೂಗಾರ್, ಪ್ರಭಾಕರ್ ಜೋಶಿ, ಶ್ರೀಶೈಲ ಹುದ್ದಾರ್, ಸಂಗೀತದಲ್ಲಿ ನಾರಾಯಣ.ಎಂ, ಅನಂತಚಾರ್ಯ ಬಾಳಾಚಾರ್ಯ, ಅಂಜಿನಪ್ಪ ಸತ್ಪಾಡಿ, ಅನಂತ ಕುಲಕರ್ಣಿ, ಜಾನಪದ ಕ್ಷೇತ್ರದಲ್ಲಿ ಸಹಮದೇವಪ್ಪ ಈರಪ್ಪ ನಡಿಗೇರ್, ಗುಡ್ಡ ಪಾಣಾರ, ಕಮಲಮ್ಮ ಸೂಲಗಿತ್ತಿ, ಸಾವಿತ್ರಿ ಪೂಜಾರ್, ರಾಚಯ್ಯ ಸಾಲಿಮಠ, ಮಹೇಶ್ವರ್ ಗೌಡ ಡಿ.ಮಾದೇಗೌಡ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹತ್ತು ಸಂಘ ಸಂಸ್ಥೆಗಳಿಗೂ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಶಸ್ತಿ ಆಯ್ಕೆ ಕುರಿತಂತೆ ಅಂತಿಮ ಸಭೆ ನಡೆದಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯ್ಕೆ ಸಲಹಾ ಸಮಿತಿ ನಾನಾ ಕ್ಷೇತ್ರಗಳ ಗಣ್ಯರನ್ನು 1:2 ಅನುಪಾತದಲ್ಲಿ 134ಜನರ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು. ಪ್ರಶಸ್ತಿ ಪುರಸ್ಕೃತರಿಗೆ ನ.1ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಲಾ 5 ಲಕ್ಷ ನಗದು, 25 ಗ್ರಾಂ. ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ.
ಮೈಸೂರಿನ ಮನೆ ಮಾದೇಗೌಡ ಎಂದೇ ಕ್ಯಾತರಾಗಿರುವ ಡಿ.ಮಾದೇಗೌಡ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅವರು ಪ್ರಶಸ್ತಿಗೆ ಭಾಜನರಾಗಿದ್ದು, ಡಿ.ಮಾದೇಗೌಡ ಅವರು ಮೈಸೂರಿನ ಕುಂಬಾರಕೊಪ್ಪಲು ನಿವಾಸಿಯಾಗಿದ್ದು, ಮನೆ ಮಾದೇಗೌಡ ಎಂದೇ ಖ್ಯಾತರಾಗಿದ್ದಾರೆ. ಸಿಐಟಿಬಿ ಅಧ್ಯಕ್ಷರಾಗಿದ್ದಾಗ ಸಾರ್ವಜನಿಕರಿಗೆ ಸಾವಿರಾರು ಮನೆಗಳನ್ನು ನಿರ್ಮಿಸಿಕೊಟ್ಟಿರುವ ಹೆಗ್ಗಳಿಗೆ ಇವರದು. ಆರಂಭದಲ್ಲಿ ಜನತಾ ಪರಿವಾರದಲ್ಲಿ ಇದ್ದ ಇವರು, ಬಳಿಕ ಕಾಂಗ್ರೆಸ್ ಪಕ್ಷದಲ್ಲಿದ್ದರು. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ ಇವರ ಸೇವೆ ಪರಿಗಣಿಸಿರುವ ಸರ್ಕಾರ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಿದೆ.
ಪ್ರೊ.ಎಂ.ಕೃಷ್ಣೇಗೌಡ ಅವರು ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದಾರೆ. ಮೈಸೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಸುದೀರ್ಘ ಕಾಲ ಅಧ್ಯಾಪಕ ವೃತ್ತಿ ನಡೆಸಿ, ಪ್ರಾಂಶುಪಾಲರಾಗಿ ಸೇವೆಯಿಂದ ನಿವೃತ್ತರಾಗಿದ್ದಾರೆ. ವಾಗ್ಮಿ ಹಾಗೂ ಭಾಷಣಕಾರರಾಗಿ ಜನಪ್ರಿಯತೆ ಪಡೆದಿದ್ದಾರೆ.