ಬೆಂಗಳೂರು: ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಮಿಲಿಟರಿ ಅಧಿಕಾರಿಗಳು, ನ್ಯಾಯಾಧೀಶರು, ರಾಜಕಾರಣಿಗಳು, ಕ್ರೀಡಾಪಟುಗಳು, ಆಡಳಿತ ಸೇವೆ ಅಧಿಕಾರಿಗಳು ಹೀಗೆ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ ಎಂದು ಭಾರತದ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ತಿಳಿಸಿದರು.
ನಗರದ ರಾಷ್ಟ್ರೀಯ ಮಿಲಿಟರಿ ಶಾಲೆಯ ಅಮೃತ ಮಹೋತ್ಸವ ಆಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, 1946ರಲ್ಲಿ ಕಿಂಗ್ ಜಾರ್ಜ್ ಈ ಶಾಲೆಯನ್ನು ಪ್ರಾರಂಭಿಸಿದರು. 2008ರಲ್ಲಿ ಇದು ರಾಷ್ಟ್ರೀಯ ಮಿಲಿಟರಿ ಶಾಲೆಯಾಗಿ ನಾಮಕರಣಗೊಂಡಿತು. ಭಾರತದ ಮೊದಲ ಕಮಾಂಡರ್ ಇನ್ ಚೀಪ್ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕೆ.ಎಂ ಅವರು ಈ ಶಾಲೆಯ ವಿದ್ಯಾರ್ಥಿ ಅಲ್ಲದೆ ಜನರಲ್ ತಿಮ್ಮಯ್ಯ ಸಹ ಈ ಮಣ್ಣಿನ ಮಗ ಎಂದು ಹೆಮ್ಮೆಯಿಂದ ನುಡಿದರು.
ಕರ್ನಾಟಕ ಶೈಕ್ಷಣಿಕ ಹಾಗೂ ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿದೆ. ನಾವೀನ್ಯತೆ ಸೂಚ್ಯಂಕದಲ್ಲಿ ದೇಶದಲ್ಲಿಯೇ ಕರ್ನಾಟಕ ಪ್ರಥಮ ಸ್ಥಾನ ಗಳಿಸಿದೆ. ಬಂಡವಾಳ ಹೂಡಿಕೆಯಲ್ಲಿ ಬೆಂಗಳೂರು ವಿಶ್ವದಲ್ಲಿಯೇ 5 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಅಲಂಕರಿಸಿದೆ. ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ 23 ರಾಜ್ಯದ ವಿದ್ಯಾರ್ಥಿಗಳು ಈ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿದ್ದಾರೆ. ಸಮಾನತೆ, ಏಕತೆ ಸಾರುವ ಇಲ್ಲಿಯ ಶಿಕ್ಷಣ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಈ ಶಾಲೆಯಲ್ಲಿ ಕಲಿತವರು ಪರಮವೀರ ಚಕ್ರ, ವಿಶಿಷ್ಟ ಸೇವಾ ಪದಕ ಮುಂತಾದ ಮನ್ನಣೆ ಪಡೆದಿದ್ದಾರೆ. ಸಿ.ಎನ್. ಗೋರ್ಮಡೆ ಅವರಿಗೆ ಪರಮ ವಿಶಿಷ್ಟ ಸೇವಾ ಪದಕವನ್ನು ತಾವೇ ಪ್ರದಾನ ಮಾಡಿದ್ದಾಗಿ ಸ್ಮರಿಸಿದರು.
ಈ ಪ್ರಸ್ತುತ ವರ್ಷದಿಂದ ಬಾಲಕಿಯರಿಗೆ ಸಹ ಮಿಲಿಟರಿ ಶಾಲೆಯಲ್ಲಿ ಪ್ರವೇಶ ಕಲ್ಪಿಸಲು ಸಂತೋಷವಾಗುತ್ತದೆ. ಕ್ಯಾ. ಅಭಿಲಾಷಾ ಬಾರಾಕ್ ಅವರು ಮೊದಲ ಮಹಿಳಾ ಅಧಿಕಾರಿಯಾಗಿ ಸೇನೆಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಮಹಿಳಾ ಸಶಕ್ತೀಕರಣದ ರೂವಾರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಅಮೃತ ಮಹೋತ್ಸವ ಸವಿ ನೆನಪಿಗಾಗಿ ಸ್ಮರಣ ಸಂಚಿಕೆಯನ್ನು ರಾಷ್ಟ್ರಪತಿಗಳು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದೇಶದ ಪ್ರಥಮ ಮಹಿಳೆ ಸವಿತಾ ಕೋವಿಂದ್, ಭಾರತೀಯ ನೌಕಾಪಡೆಯ ಉಪಮುಖ್ಯಸ್ಥರು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿ ಸಿ.ಎನ್.ಗೋರ್ಮಡೆ ಉಪಸ್ಥಿತರಿದ್ದರು.