ಬೆಂಗಳೂರು : ಆರರಿಂದ ಹನ್ನೆರಡು ವರ್ಷದ ಮಕ್ಕಳಿಗೆ ಸದ್ಯದಲ್ಲೇ ಲಸಿಕೆ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಸದ್ಯಕ್ಕೆ ಯಾರು ಆತಂಕ ಪಡುವ ಅವಶ್ಯಕತೆಯಿಲ್ಲ. ದೊಡ್ಡ ಮಟ್ಟದ ಕೇಸ್ ಹೆಚ್ಚಳವಾಗಿಲ್ಲ. ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಲಸಿಕೆ ಮತ್ತು ಮಾಸ್ಕ್ ಕಡ್ಡಾಯವಾಗಿ ಹಾಕಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.
ಅನಗತ್ಯವಾಗಿ ಭಯ, ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ. ಬೂಸ್ಟರ್ ಡೋಸ್ ನ್ನು ಈಗ ಜನರು ತೆಗೆದುಕೊಳ್ಳುತ್ತಿದ್ದಾರೆ. 2-3 ದಿನಗಳಿಂದ ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದರು. ಒಮಿಕ್ರಾನ್ ಹೊಸ ತಳಿ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈಗಾಗಲೇ ಲ್ಯಾಬ್ ಗೆ ಸ್ಯಾಂಪಲ್ ಕಳಿಸಲಾಗಿದೆ. ಇಂದು ವರದಿ ಬರಬಹುದು ಎಂದು ತಿಳಿಸಿದರು.
6-12 ನೇ ವರ್ಷದ ಮಕ್ಕಳ ಶೀಘ್ರವೇ ಲಸಿಕೆ ಅಭಿಯಾನ ಪ್ರಾರಂಭ ಮಾಡುತ್ತೇವೆ. ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಇಡೀ ರಾಜ್ಯದಲ್ಲಿ ದೊಡ್ಡ ಮಟ್ಟದ ಅಭಿಯಾನ ಆರಂಭ ಮಾಡುತ್ತೇವೆ. ಸಿಎಂ ಕೂಡಾ ಈಗಾಗಲೇ ಈ ಬಗ್ಗೆ ನನ್ನ ಜೊತೆ ಚರ್ಚೆ ಮಾಡಿದ್ದಾರೆ. ಸೋಮವಾರದಿಂದಲೇ ಲಸಿಕೆ ಕೊಡಲು ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಇಂದು ಕೂಡಾ ಶಿಕ್ಷಣ ಇಲಾಖೆ ಸಚಿವರು, ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಬೇಸಿಗೆ ರಜೆ ಪ್ರಾರಂಭವಾಗಿದೆ. ಹೀಗಾಗಿ ಶಾಲೆಯಲ್ಲಿ ಮಾಡಬೇಕೆ ಅಥವಾ ಆಯಾ ಇನ್ಸ್ಟಿಟ್ಯೂಷನ್ ನಲ್ಲಿ ಮಾಡಬೇಕೆ ಎಂದು ಚರ್ಚೆ ಮಾಡುತ್ತೇವೆ ಎಂದು ಸುಧಾಕರ್ ಹೇಳಿದರು.