ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ 5.31 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದು, ಈ ತಿಂಗಳಾಂತ್ಯದೊಳಗೆ ಮತದಾರರ ಚೀಟಿ ಹಾಗೂ ಬಾಕಿ ಇರುವ 3.50 ಲಕ್ಷ ಜನರ ಮತದಾರರ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ಕುಮಾರ್ ಮೀನಾ ತಿಳಿಸಿದ್ದಾರೆ.
ಜ.15ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ 5.30 ಕೋಟಿ ಮತದಾರರು ಅರ್ಹರಿದ್ದರು. ನಂತರದಲ್ಲಿ 16.04 ಲಕ್ಷ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಒಟ್ಟು ಮತದಾರರ ಪೈಕಿ 2.67 ಕೋಟಿ ಪುರುಷರು, 2.64 ಕೋಟಿ ಮಹಿಳೆಯರು ಹಾಗೂ 4,927 ಇತರ ಮತದಾರರಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸುವ ಯುವ ಮತದಾರರು 11.71 ಲಕ್ಷ ಇದ್ದು, 6.45 ಲಕ್ಷ ಪುರುಷರು, 5.26 ಲಕ್ಷ ಮಹಿಳೆಯರು, 181 ಇತರರು ಇದ್ದಾರೆ ಎಂದು ಹೇಳಿದರು. ಏ. 25ರವರೆಗೆ 37.94 ಲಕ್ಷ ‘ಮತದಾರರ ಗುರುತಿನ ಚೀಟಿ’ ವಿತರಿಸಿದ್ದು, ಬಾಕಿ ಇರುವ 3.50 ಮತದಾರರ ಗುರುತಿನ ಚೀಟಿಯನ್ನು ತಿಂಗಳ ಅಂತ್ಯಕ್ಕೆ ವಿತರಿಸಲಾಗುವುದು ಎಂದು ತಿಳಿಸಿದರು.
58,545 ಮತಗಟ್ಟೆ
ಮತದಾರರ ಸಂಖ್ಯೆಗನುಗುಣವಾಗಿ ಈ ಮೊದಲು 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತದಾರರ ಸಂಖ್ಯೆ ನೋಂದಣಿಯಲ್ಲಿ ಹೆಚ್ಚಳವಾಗಿರುವುದರಿಂದ 263 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2018ರ ಚುನಾವಣೆಯಲ್ಲಿ 56,696 ಮತಗಟ್ಟೆ ಸ್ಥಾಪಿಸಲಾಗಿತ್ತು. ಮತದಾನ ಕೇಂದ್ರದಲ್ಲಿ ಮೂಲಸೌಲಭ್ಯ, ಆಯ್ದ ಸ್ಥಳಗಳಲ್ಲಿ ಮತದಾರರಿಗೆ ಕುರ್ಚಿಗಳನ್ನು ಒಳಗೊಂಡ ಶಾಮಿಯಾನ ಒದಗಿಸಲಾಗುತ್ತದೆ. ಕೆಲವು ಜಿಲ್ಲೆಯಲ್ಲಿ ವಿಶ್ರಾಂತಿ ಕೊಠಡಿಯಲ್ಲಿ ಮತದಾರರಿಗೆ ಟೋಕನ್ ನೀಡಲಾಗುವುದು. ಇದು ಸರತಿಯಲ್ಲಿ ನಿಲ್ಲುವ ಸಮಯವನ್ನು ಕಡಿಮೆ ಮಾಡಲಿದೆ.
1,15 ಲಕ್ಷ ಬ್ಯಾಲೆಟ್ ಯೂನಿಟ್
1,15,709 ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತದೆ. 82,543 ಕಂಟ್ರೋಲ್ ಯೂನಿಟ್, 89,379 ವಿವಿಪ್ಯಾಟ್ಗಳನ್ನು ಬಳಕೆ ಮಾಡಲಾಗುತ್ತಿದೆ. ಈಗಾಗಲೇ ಇವಿಎಂ ಬಗ್ಗೆ ಅರಿವು ಕಾರ್ಯಕ್ರಮ ಮಾಡಲಾಗಿದೆ. 16 ವಿಧಾನಸಭೆ ಕ್ಷೇತ್ರದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವುದರಿಂದ ಎರಡು ಬ್ಯಾಲೆಟ್ ಯೂನಿಟ್ಗಳನ್ನು ಬಳಸಲಾಗುವುದು.
80,459 ಸಿಬ್ಬಂದಿ ಭದ್ರತಾ ಸಿಬ್ಬಂದಿ
ಚುನಾವಣೆ ಶಾಂತಿಯುತವಾಗಿ ನಡೆಯಲು ಭದ್ರತೆಗಾಗಿ 80,459 ಸಿಬ್ಬಂದಿ ನಿಯೋಜಿಸಲಾಗಿದೆ. 54,682 ಪೊಲೀಸ್ ಸಿಬ್ಬಂದಿ, 20 ಸಾವಿರ ಗೃಹ ರಕ್ಷಕ ಸಿಬ್ಬಂದಿ, 90 ಕೆಎಸ್ಆರ್ಪಿ ತುಕಡಿ, 5,037 ಸಿಎಆರ್/ಡಿಎಆರ್, 650 ಎಸ್ಎಪಿ/ಸಿಎಪಿಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 650 ಎಸ್ಎಪಿ/ಸಿಎಪಿಎಫ್ ಸಿಬ್ಬಂದಿ ಪೈಕಿ 405 ಸಿಬ್ಬಂದಿ ಈಗಾಗಲೇ ರಾಜ್ಯಕ್ಕೆ ಆಗಮಿಸಿದ್ದು, 245 ಸಿಬ್ಬಂದಿ ಶೀಘ್ರದಲ್ಲಿಯೇ ಬರಲಿದ್ದಾರೆ.
2,615 ಅಭ್ಯೃಥಿಗಳು
ಚುನಾವಣಾ ಕಣದಲ್ಲಿ 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2429 ಪುರುಷರು, 185 ಮಹಿಳೆಯರು ಮತ್ತು ಇತರ ಒಬ್ಬರು ಅಭ್ಯರ್ಥಿ ಇದ್ದಾರೆ. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 24 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೊಸಕೋಟೆಯಲ್ಲಿ 23, ಚಿತ್ರದುರ್ಗದಲ್ಲಿ 21 ಹಾಗೂ ಯಲಹಂಕ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಳು ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಯಮಕನಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ ಕ್ಷೇತ್ರದಲ್ಲಿ ತಲಾ ಐವರು ಸ್ಪರ್ಧಿಸಿದ್ದಾರೆ.