ಬೆಂಗಳೂರು: ವಿಪಕ್ಷಗಳು ಹೇಳುವಂತೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳುವುದಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ನಾಲ್ಕು ವರ್ಷ ಪೂರೈಸುತ್ತಾರೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಇಂದು ಸಿಎಂ ಕುಮಾರಸ್ವಾಮಿ ಅವರು ಅನೌಪಚಾರಿಕ ಸಚಿವ ಸಂಪುಟದ ಸಭೆಯನ್ನು ಕರೆದಿದ್ದು ಈ ವೇಳೆ ದೇಶ ಹಾಗೂ ರಾಜ್ಯ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚಿಸಿ ವಿಶ್ಲೇಷಣೆ ಮಾಡಲಾಯಿತು. ಅದಲ್ಲದೆ ಮೈತ್ರಿ ಸರ್ಕಾರದ ಮೇಲೆ ವಿಪಕ್ಷಗಳು ಮಾಡುತ್ತಿರುವ ಹೇಳಿಕೆ ಬಗ್ಗೆ ಚರ್ಚಿಸಲಾಯಿತು. ಎಲ್ಲ ಮೈತ್ರಿ ಸರ್ಕಾರದ ಶಾಸಕರು ಹಾಗೂ ಸಚಿವರು ಸಿಎಂ ಕುಮಾರಸ್ವಾಮಿ ಆಡಳಿತ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಬೀಳುವುದಿಲ್ಲ ಎಂದರು.
ವಿಪಕ್ಷ ನಡೆಸುವ ಷಡ್ಯಂತ್ರಕ್ಕೆ ಅವಕಾಶ ಕೊಡದೆ, ಸಿಎಂ ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ರಾಜ್ಯದಲ್ಲಿ 4 ವರ್ಷ ಅಧಿಕಾರ ಪೂರೈಸಲಿದೆ ಎಂದರು. ಈ ವೇಳೆ ಸಿಎಂ ಕುಮಾರಸ್ವಾಮಿ ಮೌನಕ್ಕೆ ಜಾರಿದ್ದು, ಸುದ್ದಿಗಾರರ ಜತೆ ಮಾತನಾಡಲು ನಿರಾಕರಿಸಿದರು. ಮೈತ್ರಿ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.