ಬೆಂಗಳೂರು: ಕರ್ನಾಟಕ ರಾಜ್ಯದ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ 2022ನೇ ಸಾಲಿನ ಸಂಚಾರದ ಸಮೀಕ್ಷೆಯನ್ನು ಆರಂಭಿಸಲಾಗಿದ್ದು, ಫೆ. 25ರವರೆಗೆ ನಡೆಯಲಿದೆ.
ರಸ್ತೆ ಸಂಚಾರ ಸಮೀಕ್ಷೆಯು ಫೆ. 25ರ ಬೆಳಿಗ್ಗೆ 6 ಗಂಟೆಯವರೆಗೆ ನಡೆಯಲಿದ್ದು, ಸಮೀಕ್ಷೆಗೆ ಸುಮಾರು 4463 ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ತೆರೆಯಲಾಗಿದೆ.
ಈ ಸಮೀಕ್ಷೆಯ ಮುಖ್ಯ ಉದ್ದೇಶ, ವಾಹನ ಸಂಚಾರದ ಬೆಳವಣಿಗೆ ತೀವ್ರತೆಯನ್ನು ಗಮನಿಸಿ ರಸ್ತೆಗಳ ಮೇಲ್ಮೈಯನ್ನು ಅಭಿವೃದ್ಧಿ ಪಡಿಸುವುದು, ರಸ್ತೆಗಳನ್ನು ಅಗಲ ಪಡಿಸುವುದು ಹಾಗೂ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಇವೇ ಮೊದಲಾದ ಹಲವಾರು ರಸ್ತೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರವು ರೂಪಿಸಲು ಮತ್ತು ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ.
ವಾಹನ ಸಂಚಾರ ವಿವರಗಳನ್ನು ಸಂಗ್ರಹಿಸಲು ರಾಜ್ಯದಲ್ಲಿ 4463 ಗಣತಿ ಕೇಂದ್ರಗಳಲ್ಲಿ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ಗಳನ್ನು ನೇಮಿಸಲಾಗಿದೆ. ಈ ವಾಹನ ಸಂಚಾರದ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಬೆಂಗಳೂರಿನ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) ಅವರು ತಿಳಿಸಿದ್ದಾರೆ.