ಬೆಂಗಳೂರು : ರಾಜ್ಯ ವಿದಾನ ಮಂಡಲ ಅಧಿವೇಶನ ಇಂದಿನಿಂದ ಮತ್ತೆ ಆರಂಭವಾಗಿದೆ. ಆರಂಭದಲ್ಲಿಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರು ಹಾಗೂ ಸಿಎಂ ಬೊಮ್ಮಾಯಿ ಅವರನ್ನು ಟೀಕಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಪೀಕರ್ ಮಧ್ಯ ಪ್ರವೇಶ ಮಾಡಿ ಬೊಮ್ಮಾಯಿ ಅವರು ನಿಮ್ಮ ಫ್ರೆಂಡ್ ಎಂದು ಹೇಳುತ್ತಾ, ಟೀಕಿಸುವುದು ಸರಿಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಸ್ನೇಹವೇ ಬೇರೆ. ರಾಜಕಾರಣವೇ ಬೇರೆ. ನೀವು ಆರೆಸ್ಸೆಸ್ ನಿಂದ ಬಂದವರು. ಸಿದ್ಧಾಂತ ಬೇರೆ ಇದೆ. ಸ್ನೇಹ ಹೊರಗೆ ಇರುತ್ತದೆ. ಇಲ್ಲಿ ರಾಜಕಾರಣ ಮಾತ್ರ ಇರುತ್ತದೆ ಎಂದು ಕಿಚಾಯಿಸಿದರು.
ಬಿಜೆಪಿ ಸರ್ಕಾರ ಡಬಲ್ ಇಂಜೀನ್ ನಿರ್ಮಿಸಿಕೊಂಡಿದ್ದರಿಂದಾಗಿಯೇ ಡಬ್ಬಾ ಸರ್ಕಾರವಾಗಿದೆ. ಜನರಿಗೆ ಮೋಸ ಮಾಡುವುದೇ ಇವರ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಚಿವ ಮುನಿರತ್ನ ಹಾಗೂ ಆರ್. ಅಶೋಕ್ ಹೊರಗೆ ಹೋಗುವ ಪ್ರಯತ್ನ ಮಾಡಿದ್ದರು. ಈ ಸಂದರ್ಭದಲ್ಲಿ ಕುತಕೊಳ್ರಪ್ಪ. ಚರ್ಚೆಯ ವಿಷಯದಲ್ಲಿ ಏಕೆ ಹೀಗೆ ಹೋಗುತ್ತೀರಿ ಎಂದು ಕಿಡಿಕಾರಿದ್ದಾರೆ.
ಆಗ ಮಾಜಿ ಸಿಎಂ ಯಡಿಯೂರಪ್ಪ ಅವರು ಮಧ್ಯ ಪ್ರವೇಶಿಸಿ ಅವರು ಹೊರಗೆ ಹೋಗುತ್ತಿದ್ದವರು ನೀವು ಕರೆದ ಕೂಡಲೇ ಮರಳಿ ಬಂದಿದ್ದಾರೆ ನೋಡಿ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನೀವು ಈಗ ಹಿಂದೆ ಕುಳಿತಿದ್ದೀರಿ. ಹೀಗಾಗಿ ನಿಮಗೆ ಎಲ್ಲವೂ ಅರ್ಥವಾಗುತ್ತಿದೆ. ನೀವು ಎಲ್ಲವನ್ನೂ ಗಮನಿಸುತ್ತಿದ್ದೀರಿ ಎಂದು ಕಾಲು ಎಳೆಯುವ ಕಾರ್ಯ ಮಾಡಿದ್ದಾರೆ.