ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಕೊರೊನಾ ಸೋಂಕು ಹತೋಟಿಯಲ್ಲಿದೆ ಇಂತಹ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಶೇ.50 ಹಾಜರಾತಿ, ಮಾಲ್ಗಳಿಗೆ ಕಡಿವಾಣ ಹಾಕುವಂತೆ ನಾವು ಸರ್ಕಾರಕ್ಕೆ ಯಾವುದೇ ಮನವಿ ಮಾಡಿಕೊಂಡಿಲ್ಲ.ಅಂತಾರಾಷ್ಟ್ರೀಯ ವಿಮಾನಗಳಿಂದ ರಾಜ್ಯಕ್ಕೆ ಆಗಮಿಸುವವರ ಮಾಹಿತಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಂದ ಪಡೆದು ಅಂತವರ ಮೇಲೆ ಹದ್ದಿನ ಕಣ್ಣಿಡುವ ಹೊಣೆಯನ್ನು ನಗರ 27 ಎಂಓಎಚ್ಗಳಿಗೆ ನೀಡಲಾಗಿದೆ ಎಂದು ಹೇಳಿದರು. ಇದರ ಜೊತೆಗೆ ಕೊರೊನಾ ಸೋಂಕು ತಪಾಸಣೆ ಕಾರ್ಯವನ್ನು ನಾವು ತೀವ್ರಗೊಳಿಸಿದ್ದೇವೆ. ವಿಮಾನ, ರೈಲು ಮತ್ತು ಬಸ್ಗಳಿಂದ ನಗರಕ್ಕೆ ಬರುವ ಎಲ್ಲಾ ಪ್ರಯಾಣಿಕರನ್ನು ತಪಾಸಣೆ ನಡೆಸಲಾಗುತ್ತಿದೆ.
ಒಂದು ವೇಳೆ ಸೋಂಕು ತೀವ್ರವಾದರೆ ಆ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ ಓಮಿಕ್ರಾನ್ ಸೋಂಕು ಹರಡದಂತೆ ನೋಡಿಕೊಳ್ಳಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಇದುವರೆಗೂ ಒಂದೇ ಕಡೆ 10 ಸೋಂಕು ಪ್ರಕರಣಗಳು ಪತ್ತೆಯಾದರೆ ಆ ಪ್ರದೇಶವನ್ನು ಕ್ಲಸ್ಟರ್ ಎಂದು ಘೋಷಣೆ ಮಾಡಲಾಗುತ್ತಿತ್ತು. ಆದರೆ, ಓಮಿಕ್ರಾನ್ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಒಂದು ಕಡೆ 3 ಸೋಂಕು ಪ್ರಕರಣಗಳು ಕಾಣಿಸಿಕೊಂಡರೆ ಆ ಸ್ಥಳವನ್ನುಕ್ಲಸ್ಟರ್ ಎಂದು ಘೋಷಣೆ ಮಾಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಣೆ ನೀಡಿದರು.
ನಗರದಲ್ಲಿ ಪ್ರತಿನಿತ್ಯ 150 ಆಸುಪಾಸಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರರ್ಥ ನಮ್ಮಿಂದ ಇನ್ನು ಸೋಂಕು ದೂರವಾಗಿಲ್ಲ ಹೀಗಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವವರ ವಿರುದ್ಧ ದಂಡ ಪ್ರಯೋಗ ಮಾಡಲು ಈಗಾಗಲೇ ಮಾರ್ಷಲ್ಗಳ 54 ತಂಡ ರಚನೆ ಮಾಡಲಾಗಿದೆ. ಅವರ ಕಾರ್ಯಕ್ಕೆ ಗೃಹ ರಕ್ಷಕ ದಳದ ಸಿಬ್ಬಂದಿಗಳು ಸಾಥ್ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಓಮಿಕ್ರಾನ್ ರಾಜ್ಯ ಪ್ರವೇಶಿಸದಂತೆ ಎಚ್ಚರ ವಹಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿ ಕೆಲವು ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ. ಅವರು ಸೂಚಿಸುವ ನಿರ್ಧಾರಗಳನ್ನು ಪಾಲನೆ ಮಾಡುವುದು ಬಿಬಿಎಂಪಿ ಕರ್ತವ್ಯ ಈ ನಿಟ್ಟಿನಲ್ಲಿ ನಾವು ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ವಿವರಿಸಿದರು.